ಲಾಕ್ ಡೌನ್ ನಡುವೆ ಚಿಕ್ಕಮಗಳೂರಲ್ಲಿ ನವ ವಿವಾಹಿತೆ ಅನುಮಾನಾಸ್ಪದ ಸಾವು
ಚಿಕ್ಕಮಗಳೂರು, ಏಪ್ರಿಲ್ 06: ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಲಾಕ್ ಡೌನ್ ವಿಧಿಸಲಾಗಿದೆ. ಈ ಸಮಯದಲ್ಲಿ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗಾಳಿಗುತ್ತಿ ಗ್ರಾಮದಲ್ಲಿ ನವ ವಿವಾಹಿತೆ ಶ್ವೇತಾ (18) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು. ಈಗ ನನ್ನ ಬಳಿ ಹಣ ಇಲ್ಲ, ಮನೆಯ ಖರ್ಚಿಗೆ ತವರಿನಿಂದ ಹಣ ತೆಗೆದುಕೊಂಡ ಬಾ ಎಂದು ಕಿರುಕುಳ ನೀಡಿ ಹೆಂಡತಿಯನ್ನು ಗಂಡನೇ ಕೊಲೆ ಮಾಡಿರುವುದಾಗಿ ಯುವತಿ ಮನೆಯವರು ಆರೋಪಿಸಿದ್ದಾರೆ.
ತವರಿನಿಂದ ಹಣ ತರುವಂತೆ ಕಿರುಕುಳ ನೀಡಿದ್ದಾನೆ, ಶ್ವೇತಾಳನ್ನು ಹೊಡೆದು, ವಿಷ ಕುಡಿಸಿ ಕೊಲೆ ಮಾಡಲಾಗಿದೆ ಎಂದು ಶ್ವೇತಾ ಪೋಷಕರು, ಸಂಬಂಧಿಗಳು ದೂರಿದ್ದು, ಪೊಲೀಸರು ಪತಿ ವಸಂತ್ ನಾಯಕ್ ನನ್ನು ಬಂಧಿಸಿದ್ದಾರೆ. ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.