Farmer Suicide : ಕೊರೋನಾ ಲಾಕ್ ಡೌನ್ ವೇಳೆಯಲ್ಲಿಯೇ ಮತ್ತೋರ್ವ ರೈತ ಆತ್ಮಹತ್ಯೆ
ಕಲಬುರ್ಗಿ(ಏ.06): ಕೊರೋನಾ ಲಾಕ್ ಡೌನ್ ಮುಂದುವರಿದಿರುವಾಗಲೇ ಸಾಲಬಾಧೆ ತಾಳದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮಲ್ಲಾಬಾದ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಲ್ಲಾಬಾದ್ ಗ್ರಾಮದ ಕಾಳಪ್ಪ ಕಂಬಾರ(62) ಎಂದು ಗುರುತಿಸಲಾಗಿದೆ.
ಬ್ಯಾಂಕ್ ಮತ್ತು ಖಾಸಗಿಯಾಗಿ ಐದು ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ರೈತ, ಸಾಲ ಬಾಧೆಯಿಂದ ಮನನೊಂದಿದ್ದ ಎನ್ನಲಾಗಿದೆ. ಮನೆಯ ಕಿಟಕಿಗೆ ಹಗ್ಗ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಕಲಬುರ್ಗಿ ಪೊಲೀಸರು ಲೂಟಿಗಿಳಿದಿದ್ದಾರೆ ಎಂಬ ಅನುಮಾನಗಳು ಬರಲಾರಂಭಿಸಿವೆ. ಇಲಾಖೆಗೆ ಸಂಬಂಧವಿಲ್ಲದ ಯುವಕರನ್ನು ರಸ್ತೆಗೆ ಬಿಟ್ಟು ಹಣ ವಸೂಲಿ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ರಸ್ತೆಗೆ ಬರುವ ಬೈಕ್ ಸವಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಬೈಕ್ ಹಿಡಿಯಲು ನೀನ್ಯಾರು ಎಂದು ಸಾರ್ವಜನಿಕರ ಪ್ರಶ್ನೆ ಮಾಡಿದಾಗ, ನಾನು ಸಾಹೇಬರ ಕಡೆಯವನು ಎಂದು ವಸೂಲಿ ಮಾಡುತ್ತಿದ್ದ ಯುವಕ ಉತ್ತರ ಕೊಟ್ಟಿದ್ದಾನೆ.
ಅದೇ ವೇಳೆಗೆ ಖಾಸಗಿ ಕಾರಿನಲ್ಲಿ ಸ್ಥಳಕ್ಕೆ ಬಂದ ಚೌಕ್ ಠಾಣೆ ಕಾನ್ಸ್ಸ್ಟೇಬಲ್ ರಾಜು, ವಸೂಲಿ ಮಾಡುವ ಯುವಕನ್ನು ಸಮರ್ಥಿಸಿಕೊಂಡಿದ್ದಾನೆ. ನಂತರ ಪೊಲೀಸ್ ಕಾನ್ಸ್ಸ್ಟೇಬಲ್ ರಾಜು ವಶಕ್ಕೆ ಪಡೆದ ಬೈಕ್ ತೆಗೆದುಕೊಂಡು ಹೋದರೆ, ವಸೂಲಿ ಮಾಡುತ್ತಿದ್ದ ಯುವಕ ಕಾರಿನಲ್ಲಿ ಹೊರಟು ಹೋಗುತ್ತಾನೆ. ಚೌಕ್ ಠಾಣೆ ಪೊಲೀಸರ ಕರ್ಮಕಾಂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಗೆ ಕಲಬುರ್ಗಿ ನಾಗರೀಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.