ರಾಜ್ಯ ಸರ್ಕಾರದಿಂದ ರಾಮನಗರ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ ; ಹೆಚ್.ಸಿ.ಬಾಲಕೃಷ್ಣ ಗಂಭೀರ ಆರೋಪ
ರಾಮನಗರ(ಏ.26): ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರಕಾರದ ಬೇಜಬ್ದಾರಿತನದ ಫಲವಾಗಿ ಗ್ರೀನ್ ಝೋನ್ ನಲ್ಲಿ ಇದ್ದ ರಾಮನಗರ ಜಿಲ್ಲೆ ರೆಡ್ ಝೋನ್ ಗೆ ಬಂದಿದೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮಾಡಿದ ತಪ್ಪಿಗೆ ಇಂದು ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಇದರಿಂದ ವ್ಯಾಪರ ವಹಿವಾಟು ನಿಂತು ಜಿಲ್ಲೆಗೆ ಸಾಕಷ್ಟು ನಷ್ಟ ವಾಗಿದೆ. ಈ ನಷ್ಟವನ್ನ ಸರಕಾರ ಇಲ್ಲಾ ಉಸ್ತುವಾರಿ ಸಚಿವರು ಬರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರಾಗೃಹದಲ್ಲಿದ್ದ 177 ವಿಚಾರಣಾಧೀನ ಖೈದಿಗಳ ಪೈಕಿ 17 ಮಂದಿಯನ್ನ ಮಾತ್ರ ಯಾಕೆ ಕಾರಾಗೃಹದಲ್ಲೆ ಇರಿಸಿ ಕೊಂಡಿದರು ಎಂದು ಪ್ರಶ್ನೆ ಮಾಡಿದ ಬಾಲಕೃಷ್ಣ ರಾಮನಗರ ಕಾರಾಗೃಹದಲ್ಲಿದ್ದ 17 ಮಂದಿ ವಿಚಾರಣಾಧೀನ ಖೈದಿಗಳಿಂದ ಜೈಲು ಕೆಲಸ ಹಾಗೂ ಆರೋಪಿಗಳ ಸೇವೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
17 ವಿಚಾರಣಾಧೀನ ಖೈದಿಗಳನ್ನ ಇಲ್ಲೇ ಇರಿಸಿಕೊಳ್ಳಲು ಅದೇಶ ಬಂದಿತ್ತಾ ,ಇದ್ದರೆ ಆದೇಶ ಪತ್ರ ಬಹಿರಂಗ ಪಡಿಸಲಿ ಎಂದು ಬಾಲಕೃಷ್ಣ ಸರಕಾರಕ್ಕೆ ಸವಾಲ್ ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಅಧಿಕಾರಿಗಳ ಸಭೆ ನಡೆಸದ ಅವರು ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದ್ದಾರೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವ ಅಧಿಕಾರಿಗಳ ತಂಡ ಸರಿಯಿಲ್ಲ, ಆದ್ದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಹಾಗಾಗಿ ಜಿಲ್ಲೆಗೆ ಆಗಿರುವ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಇಲ್ಲವಾದರೆ ಮುಂದೆ ಹೋರಾಟ ಖಚಿತ ಎಂದು ಎಚ್ಚರಿಕೆ ಕೊಟ್ಟರು.
ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿದ್ದ ಐವರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಜೀವ ಪಣಕ್ಕಿಟ್ಟು, ಕರೋನಾ ವಿರುದ್ಧ ಹೋರಾಡುತ್ತಿದ್ದ ರಾಮನಗರದ ಪೊಲೀಸ್ ಸಿಬ್ಬಂದಿ, ನಗರಸಭೆ ಸಿಬ್ಬಂದಿ, ಕಾರಾಗೃಹದ ಸಿಬ್ಬಂದಿಗಳಿಗೆ ಕೊರೊನಾ ಭಯ ಶುರುವಾಗಿದೆ.