EBM News Kannada
Leading News Portal in Kannada

ಸ್ಮಾರ್ಟ್​​​ ಲಾಕ್​​ಡೌನ್​​​ ಜಾರಿ ಸಂಬಂಧ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ: ಹೀಗಿವೆ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಗಳು

0

ಬೆಂಗಳೂರು(ಏ.13): ಕೊರೋನಾ ವೈರಸ್​​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್​​​ 14ನೇ ತಾರೀಕಿನವರೆಗೂ ಜಾರಿಯಲ್ಲಿದ್ದ 21 ದಿನಗಳ ಕಾಲ ಲಾಕ್​​ಡೌನ್​​ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಈಗಾಗಲೇ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಈಗ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​​ಡೌನ್​​ ಬದಲಿಗೆ ಸ್ಮಾರ್ಟ್​ ಲಾಕ್​​ಡೌನ್​ ಜಾರಿಗೊಳಿಸಲು ಚಿಂತಿಸಿದೆ. ಸ್ಮಾರ್ಟ್ ಲಾಕ್​​ಡೌನ್ ಜಾರಿಗೆ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಸಭೆಯಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರ್ಟ್ ಲಾಕ್​​ಡೌನ್ ಕುರಿತಾದ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸದ್ಯ ಜಾರಿಯಲ್ಲಿರುವ ಸಂಪೂರ್ಣ ಲಾಕ್​​ಡೌನ್​​ ಸಡಿಲಗೊಳಿಸುವ ಕುರಿತು ಚರ್ಚೆ ಮಾಡಲಾಗಿದೆ. ಆದರೂ, ಅಂತಿಮ ತೀರ್ಮಾನಕ್ಕೆ ಬಾರದ ರಾಜ್ಯ ಸರ್ಕಾರವೂ, ಕೇಂದ್ರದ ಒಪ್ಪಿಗೆ ನಂತರ ಸ್ಮಾರ್ಟ್​ ಲಾಕ್​ಡೌನ್​​​ ಜಾರಿಗೆ ಮಾಡಲು ನಿರ್ಧರಿಸಿದೆ.

ಅನಧಿಕೃತ ಕಟ್ಟಡಗಳ ಕುರಿತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಯಾಗಬೇಕು. ಈ ಪ್ರಕರಣಗಳ ಇತ್ಯರ್ಥವಾದರೆ ನಾಗರಿಕರಿಗೆ ಅನುಕೂಲ. ರಾಜ್ಯ ಸರ್ಕಾರಕ್ಕೂ ಸಂಪನ್ಮೂಲ ದೊರೆಯಲಿದೆ ಎಂಬ ಲೆಕ್ಕಾಚಾರ ಸರ್ಕಾರದ್ದು. ಜತೆಗೆ ಬಿಡಿಎ ವ್ಯಾಪ್ತಿಯಲ್ಲಿರುವ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಹಾಕಲು ನಿರ್ಧಾರ ಮಾಡಲಾಗಿದೆ. ಖಾಸಗಿ ಮತ್ತು ಸಹಕಾರಿ ಸಂಘಗಳ ಬಡಾವಣೆ ನಿರ್ಮಾಣ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲು ಕ್ರಮ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ.

ಇನ್ನು, ಇದರಿಂದ ಅನುಮತಿಗೆ ಕಾಯುತ್ತಿರುವ ನೂರಾರು ವಸತಿ ನಿರ್ಮಾಣ ಸೊಸೈಟಿಗಳಿಗೆ ಅನುಮತಿ ನೀಡಲು ಸಾಧ್ಯವಾಗಲಿದೆ. ಕೋವಿಡ್-19 ವೈರಸ್​ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತವಾಗಿದೆ. ಇದನ್ನು ಸರಿದೂಗಿಸಲು ಹಲವು ಮಾರ್ಗೋಪಾಯಗಳನ್ನು ಕಂಡು ಹಿಡಿಯುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆಯೂ ನೀಡಿದ್ಧಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ 1000 ಕೋಟಿ ರೂಪಾಯಿಗಳನ್ನು ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂದಿನ ಒಂದು ವಾರಕ್ಕೆ ಉಚಿತ ಹಾಲು ವಿತರಣೆ ವಿಸ್ತರಣೆಗೆ ನಿರ್ಧಾರ ಕೈಗೊಂಡಿದೆ. ರಾಜ್ಯದ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ ಮೂಲ ನಿವೇಶನಗಳು ಹಾಗೂ ಖಾಲಿ ಇರುವ ನಿವೇಶನಗಳನ್ನು ಹರಾಜು ಹಾಕಲು ಕ್ರಮಕ್ಕೆ ಮುಂದಾಗಿದೆ. ಪ್ರಸ್ತುತ ಕೋವಿಡ್ 19ಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಡಿ ಪೋರ್ಟಲ್ ಗಳನ್ನು ನಿರ್ವಹಿಸಲಾಗುತ್ತಿದೆ. ಇವುಗಳನ್ನು ಏಕೀಕೃತ ಪೋರ್ಟಲ್ ವ್ಯವಸ್ಥೆಯಡಿ ತರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜ್ಯ ಸರ್ಕಾರ ತೀರ್ಮಾನ ಮಾಡಿದಂತೆ ಸ್ಮಾರ್ಟ್​ ಲಾಕ್​ಡೌನ್​​ ಜಾರಿಯಾದರೆ ಮದ್ಯದಂಗಡಿ ತೆರೆಯುವ ಸಾಧ್ಯತೆ ಇದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ಮಾಡಲು ಅವಕಾಶ ದೊರೆಯಲಿದೆ. ಉತ್ಪಾದನಾ ವಲಯದಲ್ಲಿ ಅವಕಾಶ ಸಿಗಲಿದೆ. ಶೇಕಡ 50 ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ. ಕೃಷಿ ಉತ್ಪನ್ನಗಳ ಸರಬರಾಜು, ಸಾಗಾಣಿಕೆಗೆ ನಿರ್ಬಂಧ ತೆರವು ಮಾಡಲಿದ್ದಾರೆ.ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ. ಐಟಿ – ಬಿಟಿಯವರಿಗೆ ಶೇಕಡ 50 ರಷ್ಟು ಕೆಲಸ ಮಾಡಲು ಅವಕಾಶ ದೊರೆಯಲಿದೆ. ಕೋರೋನಾ ಪೀಡಿತ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುವ ಬಗ್ಗೆ ಚರ್ಚೆ ನಡೆದಿದೆ. ರೆಡ್, ಆರೆಂಜ್ ಮತ್ತು ಗ್ರೀನ್ ವಿಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ. ರೆಡ್ ಜೋನ್​​ನಲ್ಲಿ ಭದ್ರತೆಯನ್ನು ಕಠಿಣ ನಿಯಮಗಳನ್ನು ಹೇರಲಾಗುತ್ತದೆ. ಆದರೆ ಆರೆಂಜ್ ಜೋನ್ ನಲ್ಲಿ ಸೋಂಕಿತ ಪ್ರಕರಣ ಇರುವ ಕಡೆ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.

Leave A Reply

Your email address will not be published.