ವಿಜಯ್ ಅಭಿಮಾನಿಯ ಸಾವಿನಲ್ಲಿ ಅಂತ್ಯಗೊಂಡ ತಲೈವಾ ಹಾಗೂ ದಳಪತಿ ಅಭಿಮಾನಿಗಳ ನಡುವಿನ ಗಲಾಟೆ..!
ಇಬ್ಬರು ಸ್ಟಾರ್ನಟರ ಅಭಿಮಾನಿಗಳ ನಡುವೆ ವಾರ್ ಆಗೋದು ಸಾಮಾನ್ಯ. ಇಂತಹ ವಾರ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ. ನಿಜ ಜೀವನದಲ್ಲಿ ಅಭಿಮಾನಿಗಳ ನಡುವಿನ ಜಗಳ ತಾರಕಕ್ಕೇರಿದರೆ ಏನಾಗಬಹುದು ಎನ್ನುವುದಕ್ಕೆ ತಮಿಳುನಾಡಿನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಾನಂನಲ್ಲಿ ಇದೇ ತಿಂಗಳ 23ರಂದು ರಜಿನಿಕಾಂತ್ ಹಾಗೂ ವಿಜಯ್ ಅವರ ಫ್ಯಾನ್ಸ್ ನಡುವೆ ಜಗಳವಾಗಿದೆ. ಅದು ಕೊರೋನಾ ವಿರುದ್ಧದ ಹೋರಾಟಕ್ಕೆ ರಜಿನಿ ಹಾಗೂ ವಿಜಯ್ ಅವರಲ್ಲಿ ಯಾರು ಹೆಚ್ಚಾಗಿ ಧನ ಸಹಾಯ ಮಾಡಿದ್ದಾರೆ ಎಂಬ ವಿಷಯಕ್ಕೆ ಗಲಾಟೆ ಆಗಿದೆ.
ಈ ಗಲಾಟೆ ತಾರಕಕ್ಕೇರಿದ್ದು, ರಜಿನಿ ಅಭಿಮಾನಿಯಾದ ದಿನೇಶ್ ಬಾಬು ಹಾಗೂ ವಿಜಯ್ ಅಭಿಮಾನಿ ಯುವರಾಜ್ ನಡುವೆ ಈ ಮೇಲೆ ಹೇಳಿದ ವಿಷಯವಾಗಿ ವಾಗ್ವಾದ ನಡೆದಿದೆ. ದಿನೇಶ್ ಹಾಗೂ ಯುವರಾಜ್ ಇಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ನೆಚ್ಚಿನ ನಟರ ವಿಷಯವಾಗಿ ನಡೆದ ವಾಗ್ವಾದ ಮಿತಿ ಮೀರಿದಾಗ ದಿನೇಶ್ ಬಾಬು ಹಾಗೂ ಯುವರಾಜ್ ಕೈ ಕೈ ಮಿಲಾಯಿಸಿದ್ದಾರೆ. ಆಗ ಕೆಳಗೆ ಬಿದ್ದ ಯುವರಾಜ್ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಗಾಬರಿಗೊಂಡ ದಿನೇಶ್ ತಲೆಮರೆಸಿಕೊಂಡಿದ್ದರು.