ಕರ್ತವ್ಯ ನಿರತರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಸಚಿವ ಈಶ್ವರಪ್ಪ
ದಾವಣಗೆರೆ. ಏಪ್ರಿಲ್ 02: ಕೆಲವು ಇಲಾಖೆಯ ಅಧಿಕಾರಿಗಳು ಕೊರೊನಾ ವೈರಸ್ ವಿರುದ್ಧ ಹೊರಾಡಲು ತಮ್ಮ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಗೂ ಹೋಗದೇ ಕುಟುಂಬದ ಸದಸ್ಯರೊಂದಿಗೂ ಕಾಲ ಕಳೆಯದೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ದೇಶ ಹಾಗೂ ರಾಜ್ಯದಿಂದ ಈ ಕೊರೊನಾ ಸಮಸ್ಯೆ ದೂರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಹರಿಹರದ ಪಿಬಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಕೆಲವರು ದುಷ್ಕೃತ್ಯಗಳನ್ನು ಮಾಡುತ್ತಿದ್ದು, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಇದು ಸರಿಯಲ್ಲ. ಕೆಲವರು ಬಂಕ್ ಗಳ ಬಳಿ ತೆರಳಿ ಅಗತ್ಯವಿದೆ ಎಂಬ ನೆಪಮಾಡಿ ಪೆಟ್ರೋಲ್ ಹಾಕಿಸಿಕೊಂಡು ಅನಗತ್ಯವಾಗಿ ಸಂಚಾರಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರು ಕೆಲ ಭಾಗಗಳಿಗೆ ತೆರಳಿ ಕೋರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಂತವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಮಾಡಬಾರದು. ಒಂದು ವೇಳೆ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಚನ್ನಗಿರಿ ತಾಲ್ಲೂಕಿನಿಂದ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸುಮಾರು 11 ಮಂದಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಕಳೆದ ರಾತ್ರಿ ಲಭ್ಯವಾಗಿದೆ. ಗ್ರಾಮಾಂತರ ಡಿವೈಎಸ್ಪಿ ಹಾಗೂ ಅವರ ತಂಡ ಚನ್ನಗಿರಿಗೆ ತೆರಳಿ ಅವರನ್ನು ಕರೆ ತಂದಿದ್ದಾರೆ ಎಂದರು ಎಲ್ಲಾ 11 ಜನರನ್ನು ಜಿಲ್ಲಾ ಸಿಜಿ ಆಸ್ಪತ್ರೆಯಲ್ಲಿ ವಿಶೇಷ ನಿಗಾದಲ್ಲಿಡಲಾಗಿದೆ. ಈಗಾಗಲೇ 11 ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಒಟ್ಟಾರೆ ಚನ್ನಗಿರಿ ತಾಲ್ಲೂಕಿನಿಂದ 12 ಮಂದಿ ದೆಹಲಿಗೆ ತೆರಳಿದ್ದರು. ಅವರಲ್ಲಿ 11 ಮಂದಿ ಸಂಪರ್ಕದಲ್ಲಿದ್ದಾರೆ. ಮತ್ತೊಬ್ಬರು ಹೊರರಾಜ್ಯದ ಮುಸಾಫರಾಬಾದ್ ನಲ್ಲಿ ಅವಲೋಕನದಲ್ಲಿದ್ದಾರೆ ಎಂದು ತಿಳಿಸಿದರು.