India Startup Festival 2023: ಬೆಂಗಳೂರಿನಲ್ಲಿ ಸ್ಟಾರ್ಟಪ್ ಉತ್ಸವ; 10,000ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಮತ್ತು 500ಕ್ಕೂ ಹೆಚ್ಚು ಹೂಡಿಕೆದಾರರು ಒಂದೇ ವೇದಿಕೆಯಲ್ಲಿ – Kannada News | Bengaluru Hosts Over 10,000 Startups at India Startup Festival 2023 From August 10 12th
ಇಂಡಿಯಾ ಸ್ಟಾರ್ಟಪ್ ಫೆಸ್ಟಿವಲ್ನ ಎರಡೇ ಆವೃತ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಗಸ್ಟ್ 10ರಿಂದ 12ರವರೆಗೂ ನಡೆಯಲಿದೆ. ಈ ಬಾರಿಯ ಸ್ಟಾರ್ಟಪ್ ಮೇಳದಲ್ಲಿ ಗ್ರಾಮೀಣ ಭಾಗದ ಏಳ್ಗೆಯನ್ನು ಮುಖ್ಯ ವಿಷಯವನ್ನಾಗಿ ಇಟ್ಟುಕೊಳ್ಳಲಾಗಿದೆ. ವಿವಿಧ ದೇಶಗಳಿಂದ 10,000ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಈ ಹಬ್ಬದಲ್ಲಿ ಭಾಗಿಯಾಗಲಿವೆ.

ಇಂಡಿಯಾ ಸ್ಟಾರ್ಟಪ್ ಫೆಸ್ಟಿವಲ್
ಬೆಂಗಳೂರು, ಆಗಸ್ಟ್ 8: ಬೆಂಗಳೂರಿನಲ್ಲಿ 2023ರ ಸಾಲಿನ ಇಂಡಿಯಾ ಸ್ಟಾರ್ಟಪ್ ಉತ್ಸವ (India Startup Festival 2023) ಆಗಸ್ಟ್ 10ರಿಂದ 12ರವರೆಗೆ 3 ದಿನಗಳ ಕಾಲ ನಡೆಯಲಿದೆ. ನಗರದ ಮುದ್ದನಹಳ್ಳಿಯಲ್ಲಿ ಗುರುವಾರದಿಂದ ನಡೆಯುವ ಈ ಉತ್ಸವ ಇದು ಎರಡನೇ ಆವೃತ್ತಿಯಾಗಿದೆ. ಭಾರತ, ಬ್ರಿಟನ್, ಜಪಾನ್ ಸೇರಿದಂತೆ ಹಲವು ದೇಶಗಳಿಂದ 10,000ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಹಾಗು 500ಕ್ಕೂ ಹೆಚ್ಚು ಹೂಡಿಕೆದಾರರು ಈ ಮಹಾ ಸ್ಟಾರ್ಟಪ್ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟಾರ್ಟಪ್ಗಳು ವ್ಯವಹಾರ ವೃದ್ಧಿಸಲು ಈ ವೇದಿಕೆ ಅಪೂರ್ವ ಅವಕಾಶ ಕೊಡುತ್ತದೆ ಎಂದು ಹೇಳಲಾಗುತ್ತದೆ.
ಇಂಡಿಯಾ ಸ್ಟಾರ್ಟಪ್ ಫೆಸ್ಟಿವಲ್ 2023 ಸಮ್ಮೇಳನಕ್ಕೆ ‘ತಳಮಟ್ಟದಲ್ಲಿ ನಾವೀನ್ಯತೆ’ (Innovation at the bottom of the Pyramid) ಎಂಬುದು ಥೀಮ್ ಆಗಿದೆ. ಗುರುವಾರದಿಂದ ಶನಿವಾರದವರೆಗೂ ನಡೆಯುವ ಸಮ್ಮೇಳನದ ವಿವಿಧ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಭಾಗದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚೆಗಳಾಗಲಿವೆ. ಗ್ರಾಮೀಣ ಆರೋಗ್ಯ ಶಿಕ್ಷಣ, ಹಣಕಾಸು ತಂತ್ರಜ್ಞಾನ (ಫಿನ್ಟೆಕ್), ಗ್ರಾಮೀಣ ನಾವೀನ್ಯತೆ, ಕೃಷಿತಂತ್ರಜ್ಞಾನ (ಆಗ್ರಿಟೆಕ್) ಮತ್ತು ಆಹಾರತಂತ್ರಜ್ಞಾನ (ಫೂಡ್ಟೆಕ್) ಮೊದಲಾದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆಗಳಾಗುವ ನಿರೀಕ್ಷೆ ಇದೆ.
ಈ ಕಾರ್ಯಕ್ರಮಕ್ಕೆ 10,000ಕ್ಕೂ ಹೆಚ್ಚು ಸ್ಟಾರ್ಟಪ್ಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್, ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ನಡೆದಿದ್ದ ಇನ್ವೆಸ್ಟರ್ ಕನೆಕ್ಟ್ ವರ್ಕ್ಶಾಪ್ಗಳ ಮೂಲಕ ಈ ಸ್ಟಾರ್ಟಪ್ಗಳನ್ನು ಆರಿಸಲಾಗಿದೆ. ಇಂಡಿಯಾ ಸ್ಟಾರ್ಟಪ್ ಫೆಸ್ಟಿವಲ್ನಲ್ಲಿ ಇವೆಲ್ಲಕ್ಕೂ ವೇದಿಕೆ ಇರಲಿದ್ದು, ಈ ಪೈಕಿ 100 ಸ್ಟಾರ್ಟಪ್ಗಳನ್ನು ಮತ್ತೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಈ ಶತ ಸ್ಟಾರ್ಟಪ್ಗಳಿಗೆ ದೊಡ್ಡ ವೇದಿಕೆಯಲ್ಲಿ ತಮ್ಮ ವ್ಯವಹಾರ ಪ್ರಸ್ತುತಪಡಿಸುವ ಅವಕಾಶ ಸಿಗುತ್ತದೆ. ಈ 100 ಸ್ಟಾರ್ಟಪ್ಗಳಲ್ಲಿ 10 ಸ್ಟಾರ್ಟಪ್ಗಳಿಗೆ ನಗದು ಬಹುಮಾನ ಕೊಡಲಾಗುತ್ತದೆ. ಹಾಗೆಯೇ ಸಾಕಷ್ಟು ಉತ್ತೇಜನ ಮತ್ತು ಬೆಂಬಲ ಕೂಡ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಬೆಂಗಳೂರಿನ ಮುದ್ದನಹಳ್ಳಿಯಲ್ಲಿ ನಡೆಯುವ ಸ್ಟಾರ್ಟಪ್ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಸಚಿವರು ಸೇರಿದಂತೆ ಹಲವರು ಗಣ್ಯರೂ ಪಾಲ್ಗೊಳ್ಳುತ್ತಿದ್ದಾರೆ. ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ, ಸತ್ಯ ಸಾಯಿ ಯೂನಿವರ್ಸಿಟಿ ಸಂಸ್ಥಾಪಕ ಸದ್ಗುರು ಮಧುಸೂದನ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ.