‘ಬಡವರಿಗೆ 10,000 ಆಹಾರ ಕಿಟ್ ನೀಡುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ರೇಣುಕಾಚಾರ್ಯ‘- ಕಾಂಗ್ರೆಸ್ ಮಾಜಿ ಶಾಸಕ
ದಾವಣಗೆರೆ(ಏ.27): ಬಡವರಿಗೆ ಆಹಾರ ಕಿಟ್ ನೀಡುವ ವಿಚಾರದಲ್ಲೀಗ ಮಾಜಿ-ಹಾಲಿ ಶಾಸಕರು ಕಿತ್ತಾಡಿಕೊಂಡ ಘಟನೆ ನಡೆದಿದೆ. ಏಕವಚನದಲ್ಲೇ ಫೋನಿನ್ನಲ್ಲಿ ಹೊನ್ನಾಳಿ ಬಿಜೆಪಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯಗೆ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡ ಬೈದಿದ್ದಾರೆ. ಈ ವೇಳೆ ಎಂಪಿ ರೇಣುಕಾಚಾರ್ಯ ತಿರುಗಿಸಿ ಶಾಂತನಗೌಡರಿಗೆ ಬೈದರು ಎನ್ನಲಾಗುತ್ತಿದೆ.
ಎಂಪಿ ರೇಣುಕಾಚಾರ್ಯ ಒಬ್ಬ ಪ್ರಚಾರಕ. ಕ್ಷೇತ್ರದ ಜನರಿಗೆ ಪ್ರತಿನಿತ್ಯ 10 ಸಾವಿರ ಆಹಾರ ಸಾಮಗ್ರಿ ಕಿಟ್ಗಳನ್ನು ನೀಡುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಹೀಗೆ ಹೇಳಿಕೊಂಡು ತಿರುಗಾಡುವುದು ತಪ್ಪು. ಇದು ಖಂಡಿತಾ ಸುಳ್ಳು. ಒಂದು ವೇಳೆ ನಿಜಾವದರೇ ದಾಖಲೆ ತೋರಿಸಲಿ ಎಂದು ಶಾಂತನಗೌಡ ಗರಂ ಆಗಿದ್ದಾರೆ.
ಇನ್ನು, ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂದು ಜನರನ್ನು ಎಂಪಿ ರೇಣುಕಾಚಾರ್ಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾಂತನಗೌಡ ಆರೋಪಿಸಿದ್ದಾರೆ. ಹೀಗೆ ಆರೋಪಿಸಿದ ಶಾಂತನಗೌಡಗೆ ಫೋನಿನ್ನಲ್ಲಿ ಉತ್ತರಿಸಲು ಯತ್ನಿಸಿದ ಎಂಪಿ ರೇಣುಕಾಚಾರ್ಯ, ಇದನ್ನ ಕೇಳೋಕೆ ನೀವು ಯಾರು ಎಂದು ಶಾಂತನಗೌಡಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಾಂತನಗೌಡ, ನಾನು ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ. ಕೊರೋನಾ ವೈರಸ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು ಎಂದು ಎಂಪಿ ರೇಣುಕಾಚಾರ್ಯಗೆ ತಪರಾಕಿ ಬಾರಿಸಿದ್ದಾರೆ.
ಸದ್ಯ ಮಾಜಿ-ಹಾಲಿ ಶಾಸಕರ ನಡುವಿನ ಕಿತ್ತಾಟದ ಬಗ್ಗೆ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಬ್ಬರು ಜನರ ಪರವಾಗಿ ಕೆಲಸ ಮಾಡದೇ ಹೀಗೆ ಕಿತ್ತಾಡಿಕೊಂಡು ಕೂರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.