ಕೊರೋನಾ ವಿರುದ್ಧ ಹೋರಾಟ: ಬಿಎಸ್ವೈ ಸರ್ಕಾರದಲ್ಲಿ ಸಮನ್ವಯ ಕೊರತೆ ಇದೆ ಎಂದ ಡಿಕೆಶಿ
ಬೆಂಗಳೂರು(ಏ.19): ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವರಲ್ಲೇ ಸಮನ್ವಯ ಕೊರತೆ ಇದೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡುವ ವೇಳೆ ಡಿ.ಕೆ ಶಿವಕುಮಾರ್ ಹೀಗೆಂದರು.
ಸರ್ಕಾರದ ಸಚಿವರಲ್ಲಿ ಸಾಕಷ್ಟು ಗೊಂದಲಗಳಿವೆ. ಒಬ್ಬರು ಒಂದು ರೀತಿ ಹೇಳಿಕೆ ನೀಡಿದರೇ, ಮತ್ತೊಬ್ಬರು, ಮತ್ತೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ಗೊಂದಲ ಉಂಟು ಮಾಡಿದೆ. ಆರೋಗ್ಯ ಸಚಿವರು ಒಂದು ಹೇಳುವುದು, ಮತ್ತೊಬ್ಬರು ಮತ್ತೊಂದು ರೀತಿ ಹೇಳುವುದು ಸರಿಯಲ್ಲ ಎಂದರು ಡಿಕೆಶಿ.
ಇನ್ನು, ನಾವು ಈ ಸಮಯದಲ್ಲಿ ರಾಜಕಾರಣ ಮಾಡಲ್ಲ. ಎಲ್ಲವೂ ಸರಿಯಾಗಬೇಕು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು. ಎಲ್ಲವೂ ಸರಿ ಇದ್ದರೆ ನಾವೇಕೆ ಬಂದು ಸಿಎಂ ಭೇಟಿ ಮಾಡುತ್ತಿದ್ದೆವು ಎಂದು ಡಿಕೆಶಿ ಅಸಮಾಧಾನ ಹೊರಹಾಕಿದರು.
ರಾಜ್ಯದಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಕೂಡ ಸಿಎಂ ಗಮನ ಸೆಳೆದಿದ್ದೇವೆ. ಮುಂದಿನ ದಿನದಲ್ಲಿ ಎಲ್ಲ ರೀತಿಯ ಸಹಕಾರವನ್ನ ಸರ್ಕಾರಕ್ಕೆ ನೀಡುತ್ತೇವೆ ಎಂದು ಹೇಳಿದ್ದೇವೆ. ಬ್ಯಾಂಕರ್ಸ್ ಜೊತೆಯೂ ಸಭೆ ಮಾಡುವಂತೆ ಕೇಳಿದ್ದೇವೆ. ಎಲ್ಲವನ್ನೂ ಸಿಎಂ ಕೇಳಿದ್ದಾರೆ. ಮುಂದೆ ಸರ್ಕಾರ ಯಾವ ರೀತಿ ಮುನ್ನಡೆಯುತ್ತೆ ನೋಡೋಣ ಎಂದರು.
ಆರೋಗ್ಯಕ್ಕೆ ಸಂಬಂಧಪಟ್ಟಂತೆ ರೈತರು ಮತ್ತು ಅಲ್ಪಸಂಖ್ಯಾತರಿಗೆ ಆಗುತ್ತಿರುವ ನೋವು ಮತ್ತು ಮಕ್ಕಳ ವಿಧ್ಯಾಭ್ಯಾಸದ ಬಗ್ಗೆಯೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ ಕೊರೊನಾ ಸಮರದಲ್ಲಿ ಸಮನ್ವಯದ ಕೊರತೆ ಇರಬಾರದು. ಇದನ್ನ ಸರಿ ಮಾಡಿಕೊಳ್ಳಿ. ಯಾರು ಹುತ್ತ ನಿರ್ಮಿಸಿ ಇನ್ಯಾರೋ ಬಂದು ಸೇರಿಕೊಂಡಿದ್ದಾರೆ. ಹಾಗಾಗಿ ಹೀಗಾಗುತ್ತಿದೆ ಎಂದು ಡಿಕೆಶಿ ವ್ಯಂಗ್ಯವಾಡಿದರು.