ಸಿಎಂ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ನಿಗದಿ; ‘ಕಾವೇರಿ’ ಸೇರಿದಂತೆ ಹಲವು ವಿಚಾರಗಳ ಚರ್ಚೆ ಸಾಧ್ಯತೆ
ಬೆಂಗಳೂರು: ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ಭೇಟಿ ಮಾಡಲಿದ್ದು, ಈ ವೇಳೆ ಕಾವೇರಿ ವಿಚಾರವೂ ಸೇರಿದಂತೆ ರಾಜ್ಯದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದು, ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ. ಪ್ರವಾಸದ ವಿವರವನ್ನು ಭಾನುವಾರ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಸಾಬೀತು ಮಾಡಿದ ದಿನವೇ ಪ್ರಧಾನಿ ಮೋದಿ ಅವರ ಭೇಟಿಗಾಗಿ ಸಮಯ ಕೋರಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ, ‘ಪ್ರಧಾನಿ ಭೇಟಿಗಾಗಿ ಸಮಯ ಕೋರಲಾಗಿದೆ. ಸಮಯ ಕೊಟ್ಟರೆ ಮೋದಿ ಅವರು ಮತ್ತು ಕೆಲ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಬರುತ್ತೇನೆ,’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಭೇಟಿಗೆ ಸೋಮವಾರ ಸಮಯ ನಿಗದಿಯಾಗಿದೆ.
ನಾಲ್ಕು ವರ್ಷ ಪೂರೈಸಿದ ಪ್ರಧಾನಿ ಮೋದಿಗೆ ಎಚ್ ಡಿಕೆ ಅಭಿನಂದನೆ
ಇನ್ನು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಅಭಿನಂದನೆ ತಿಳಿಸುತ್ತಿರುವುದಾಗಿ ಹೇಳಿದರು. ಜೊತೆಗೆ, ಅವರು ಕೊಟ್ಟ ಆಶ್ವಾಸನೆ ಈಡೇರಿಸಿದ್ದಾರಾ? ಇಲ್ಲವಾ? ಅನ್ನೋದನ್ನ ರಾಜಕೀಯ ಪಂಡಿತರು ಹೇಳುತ್ತಾರೆ. ನಾನು ಆ ಬಗ್ಗೆ ಏನೂ ಹೇಳಲ್ಲ ಎಂದರು.