ಬೆಂಗಳೂರು: ಕಾಂತಾರ ಚಿತ್ರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಚಿತ್ರದ ಪ್ರೀಕ್ವೆಲ್ ʼಕಾಂತಾರ: ಒಂದು ದಂತಕತೆʼ (ಮೊದಲ ಅಧ್ಯಾಯ) ವನ್ನು ಹೊರತರುತ್ತಿದ್ದು, ಚಿತ್ರತಂಡವು ಮೊದಲ ಟೀಸರ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ರಿಷಬ್ ಶೆಟ್ಟಿ ಈ ಪೋಸ್ಟರ್ನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ.
ಕದಂಬರ ಆಳ್ವಿಕೆಯ ಸಮಯದ ʼದಂತಕತೆʼ ನಾಯಕನ ಕುರಿತ ಚಿತ್ರ ಇದಾಗಿರಲಿದೆ ಎಂಬ ಸುಳಿವನ್ನು ಟೀಸರ್ನಲ್ಲಿ ನೀಡಲಾಗಿದೆ. ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.