EBM News Kannada
Leading News Portal in Kannada

ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು? – Kannada News | RBI Fixed Additional CRR at 10pc, Know About CRR and Its Effect on Inflation

0


Incremental CRR Fixed by RBI: ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೋ ದರ ಏರಿಕೆ ಬದಲು ಹೆಚ್ಚುವರಿ ಸಿಆರ್​ಆರ್ ಅನ್ನು ಘೋಷಿಸಿದ್ದಾರೆ. ಇದರಿಂದ ಬ್ಯಾಂಕುಗಳ ಲಾಭದ ಓಟಕ್ಕೆ ಹಿನ್ನಡೆ ಆಗುತ್ತದಾದರೂ ಹಣದುಬ್ಬರ ನಿಯಂತ್ರಣಕ್ಕೆ ಸಹಾಯಕವಾಗಬಹುದು.

ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು?

ಬ್ಯಾಂಕ್ ಕಚೇರಿ

ನವದೆಹಲಿ, ಆಗಸ್ಟ್ 10: ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಯತ್ನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ (Repo Rate) ಏರಿಕೆ ಮಾಡದೇ ಸಿಆರ್​ಆರ್ ದರದಲ್ಲಿ ವ್ಯತ್ಯಯ ತಂದಿದೆ. ಇಂಕ್ರಿಮೆಂಟಲ್ ಅಥವಾ ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋವನ್ನು (Additional Cash Reserve Ratio) ಶೇ 10ಕ್ಕೆ ಹೆಚ್ಚಿಸಿದೆ. ಆಗಸ್ಟ್ 12ರಿಂದ ಬ್ಯಾಂಕುಗಳು ಹೆಚ್ಚುವರಿ ಸಿಆರ್​ಆರ್​ ಅನ್ನು ಶೇ. 10ರಷ್ಟು ಇಡಬೇಕು ಎಂದು ತಿಳಿಸಲಾಗಿದೆ. ಬ್ಯಾಂಕುಗಳ ಒಟ್ಟಾರೆ ಠೇವಣಿಗಳಲ್ಲಿ (NDTL- Net Demand and Time Liabilities) ಗಮನಾರ್ಹ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ಆರ್​ಬಿಐ ಹೆಚ್ಚುವರಿ ಸಿಆರ್​ಆರ್ ಅನ್ನು ಹೆಚ್ಚಿಸಲು ನಿರ್ಧರಿಸಿದೆ. ಆದರೆ, ಸಿಆರ್​ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ಶೇ. 4.5ರ ದರದಲ್ಲೇ ಮುಂದುವರಿಯಲಿದೆ. ಹೆಚ್ಚುವರಿ ಸಿಆರ್​ಆರ್ ಅನ್ನು ತಾತ್ಕಾಲಿಕವಾಗಿ ನಿಗದಿ ಮಾಡಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಏನಿದು ಸಿಆರ್​ಆರ್, ಅಥವಾ ಕ್ಯಾಷ್ ರಿಸರ್ವ್ ರೇಷಿಯೋ?

ಕ್ಯಾಷ್ ರಿಸರ್ವ್ ರೇಷಿಯೋ ಎಂಬುದು ಬ್ಯಾಂಕುಗಳು ಹೊಂದಿರುವ ಹಣದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನಗದು ಹಣ ಇಟ್ಟಿರಬೇಕು. ಈಗ ಸಿಆರ್​ಆರ್ ಶೇ. 4.5ರಷ್ಟಿದೆ ಎಂದರೆ ಒಂದು ಬ್ಯಾಂಕ್ ಬಳಿ 1 ಲಕ್ಷಕೋಟಿ ರೂನಷ್ಟು ಗ್ರಾಹಕರ ಠೇವಣಿ ಮೊತ್ತ ಬಂದಿದ್ದರೆ ಕ್ಯಾಷ್ ರೂಪದಲ್ಲಿ ಶೇ. 4.5ರಷ್ಟನ್ನು ಹಣ ಇಟ್ಟಿರಬೇಕು. ಅಂದರೆ 1 ಲಕ್ಷ ಕೋಟಿ ರೂನಲ್ಲಿ 4,500 ಕೋಟಿ ರೂನಷ್ಟು ಹಣವು ಕ್ಯಾಷ್ ರೂಪದಲ್ಲಿ ಇರಬೇಕು.

ಗ್ರಾಹಕರಿಂದ ಠೇವಣಿಯಾಗಿ ಬರುವ ಹಣವನ್ನು ಬ್ಯಾಂಕುಗಳು ಸಾಲ ನೀಡಿ ಅದರಿಂದ ಲಾಭ ಮಾಡುತ್ತವೆ. ಅದೇ ಬ್ಯಾಂಕುಗಳಿಗೆ ಪ್ರಮುಖ ಆದಾಯಮೂಲ. ಆದರೆ, ಸಿಆರ್​ಆರ್​ನಲ್ಲಿರುವ ನಗದು ಹಣದಿಂದ ಬ್ಯಾಂಕುಗಳಿಗೆ ಏನೂ ಲಾಭ ಇರುವುದಿಲ್ಲ. ಇದು ಒಂದು ರೀತಿಯಲ್ಲಿ ನಮ್ಮ ಮನೆಗಳಲ್ಲಿ ಕ್ಯಾಷ್ ಇಟ್ಟುಕೊಂಡಂತೆ.

ಹೆಚ್ಚುವರಿ ಸಿಆರ್​ಆರ್​ನಿಂದ ಹಣದುಬ್ಬರ ನಿಯಂತ್ರಿಸಬಹುದಾ?

ಆಗಲೇ ತಿಳಿಸಿದಂತೆ, ಗ್ರಾಹಕರಿಂದ ಬರುವ ಠೇವಣಿಗಳನ್ನು ಬ್ಯಾಂಕುಗಳು ಸಾಲವಾಗಿ ಕೊಟ್ಟು ಆದಾಯ ಮಾಡಿಕೊಳ್ಳುತ್ತವೆ. ಇದರಿಂದ ಆರ್ಥಿಕತೆಗೆ ಹೆಚ್ಚು ಹಣದ ಓಡಾಟವಾಗುತ್ತದೆ. ಹಣದ ಹರಿವು ಹೆಚ್ಚಾದಾಗ ಹಣದುಬ್ಬರ ಆಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಸಿಆರ್​ಆರ್ ಇದ್ದಾಗ ಬ್ಯಾಂಕುಗಳ ಬಳಿ ಸಾಲ ಕೊಡಲು ಹೆಚ್ಚು ಹಣ ಇರುವುದಿಲ್ಲ. ಇದರಿಂದ ಆರ್ಥಿಕತೆಗೆ ಹಣದ ಹರಿವು ಕಡಿಮೆ ಆಗುತ್ತದೆ. ಅ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎಂಬುದು ಆರ್​ಬಿಐನ ಆಲೋಚನೆ.

ರೈಟ್ ರಿಸರ್ಚ್ ಎಂಬ ಹಣಕಾಸು ಸಲಹಾ ಸಂಸ್ಥೆಯ ಸ್ಥಾಪಕ ಸೋನಮ್ ಶ್ರೀವಾಸ್ತವ ಅವರು ಶೇ. 10ರ ಹೆಚ್ಚುವರಿ ಸಿಆರ್​ಆರ್ ನಿಗದಿ ಮಾಡಿದ ಆರ್​ಬಿಐನ ಕ್ರಮವನ್ನು ಸ್ವಾಗತಿಸಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿರುವ ಹೆಚ್ಚುವರಿ ಹಣದ ಹರಿವನ್ನು ನಿಯಂತ್ರಿಸಲು ಇದು ಸರಿಯಾದ ಕ್ರಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಷೇರು ಮಾರುಕಟ್ಟೆ ಕಂಗಾಲಾಗಿದ್ಯಾಕೆ?

ಆರ್​ಬಿಐ ಎಂಪಿಸಿ ಸಭೆಯಿಂದ ಸಿಆರ್​ಆರ್ ಏರಿಸುವ ನಿರ್ಧಾರ ಹೊರಬಂದ ಬಳಿಕ ಷೇರುಮಾರುಕಟ್ಟೆಯಲ್ಲಿ ತುಸು ಕುಸಿತ ಉಂಟಾಗಿದೆ. ಅದರಲ್ಲೂ ಬ್ಯಾಂಕಿಂಗ್ ಸೆಕ್ಟರ್​ನ ಸೂಚ್ಯಂಕಗಳು ಕಡಿಮೆ ಆಗಿವೆ. ಹೆಚ್ಚುವರಿ ಸಿಆರ್​ಆರ್​ನಿಂದ ಬ್ಯಾಂಕುಗಳ ಲಾಭಕ್ಕೆ ಕೊಕ್ಕೆ ಬೀಳುವುದರಿಂದ ಹೂಡಿಕೆದಾರರನ್ನು ಅಧೈರ್ಯಗೊಳಿಸಿರಬಹುದು.

ತಾಜಾ ಸುದ್ದಿ

Leave A Reply

Your email address will not be published.