ಕಬ್ಬನ್ ಪಾರ್ಕಿಗೆ ಸಿಸಿಟಿವಿ ಅಳವಡಿಕೆ, ಕಾಗದ ಮೇಲೆಯೇ ಉಳಿದ ಪ್ರಸ್ತಾವ
ಬೆಂಗಳೂರು : 2015 ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಒಂಟಿಯಾಗಿ ಕಬ್ಬನ್ ಪಾರ್ಕಿನಲ್ಲಿ ವಾಯು ವಿಹಾರ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಬಳಿಕ ಪಾರ್ಕಿನಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ಬೇಡಿಕೆ ತೀವ್ರಗೊಂಡಿತ್ತು. ಆದರೆ, ಇಂದು ಕೂಡಾ ಸಿಸಿಟಿವಿ ಅಳವಡಿಕೆ ಪ್ರಸ್ತಾವ ಕಾಗದ ಮೇಲೆಯೇ ಉಳಿದಿದೆ.
ಸಿಸಿಟಿವಿ ಅಳವಡಿಕೆ ಯಾರ ಜವಾಬ್ದಾರಿ ಎಂಬ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಲವರನ್ನು ವಿಚಾರಿಸಲು ಮುಂದಾದ್ದಾಗ ಒಬ್ಬರು ಮತ್ತೊಬ್ಬರ ಕಡೆಗೆ ಕೈ ತೋರಿಸುತ್ತಾರೆ. ಪೊಲೀಸರು ತೋಟಗಾರಿಕೆ ಇಲಾಖೆಗೆ ಹೇಳಿದ್ದರೆ, ತೋಟಗಾರಿಕೆ ಇಲಾಖೆ, ಬೆಸ್ಕಾಂ, ಬೆಸ್ಕಾಂ ಬಿಬಿಎಂಪಿಗೆ ಕಡೆಗೆ ಬಿಬಿಎಂಪಿ ತೋಟಗಾರಿಕೆ ಇಲಾಖೆಯದ್ದೇ ಜವಾಬ್ದಾರಿ ಎನ್ನುತ್ತದೆ.
ಈ ಮಧ್ಯೆ 300 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕಿಗೆ 8 ಕಡೆ ಪ್ರವೇಶದ್ವಾರವಿದೆ. ಇವುಗಳಲ್ಲಿ ಎಂ. ಜಿ. ರಸ್ತೆ, ಕಸ್ತೂರಿ ಬಾ ರಸ್ತೆ. ಹಡ್ಸನ್ ಸರ್ಕಲ್, ಅಂಬೇಡ್ಕರ್ ವಿಧಿ ಬಿಟ್ಟರೆ ಉಳಿದ ಪ್ರವೇಶದ್ವಾರಗಳು ಅಸುರಕ್ಷಿತವಾಗಿವೆ.
ಪ್ರಸ್ತುತ ಇಲ್ಲಿ ಕೆಲವೇ ಪೊಲೀಸರು ಹಾಗೂ 22 ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ವಾಹನ ಕಳ್ಳತನ, ಸರಗಳ್ಳತನ ತಡೆಗಟ್ಟುವಲ್ಲಿ ಸಾಧ್ಯವಾಗುತ್ತಿಲ್ಲ. ಸಂಚಾರ ದಟ್ಟಣೆ ಸಂದರ್ಭದಲ್ಲಂತೂ ಇಲ್ಲಿ ಶೋಚನೀಯ ಪರಿಸ್ಥಿತಿ ಕಂಡಬರುತ್ತದೆ.
ಕಬ್ಬನ್ ಪಾರ್ಕಿನಲ್ಲಿ ಸಿಸಿಟಿವಿ ಅಳವಡಿಸುವ ಪ್ರಸ್ತಾವ 2013ರಿಂದಲೂ ಇದ್ದು, 2015ರ ಸಾಮೂಹಿಕ ಅತ್ಯಾಚಾರ ಘಟನೆ ನಂತರ ತೀವ್ರಗೊಂಡಿದೆ. ಆದರೆ, ಈವರೆಗೂ ಅದನ್ನು ಅಳವಡಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ತೋಟಗಾರಿಕೆ ಮೂಲಗಳು ಹೇಳಿವೆ.
ವಿಶಾಲ ವಿಸ್ತೀರ್ಣವುಳ್ಳ ಕಬ್ಬನ್ ಪಾರ್ಕಿನಲ್ಲಿ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಅದರಲ್ಲೂ ವಾರಾಂತ್ಯ ಹಾಗೂ ಕ್ರಿಕೆಟ್ ಸಂದರ್ಭದಲ್ಲಂತೂ ಭಾರಿ ಕಷ್ಟ. ಕ್ರಿಕೆಟ್ ವೀಕ್ಷಕರು ಪಾರ್ಕಿನೊಳಗೆ ವಾಹನಗಳ ಪಾರ್ಕಿಂಗ್ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಭದ್ರತೆ ಒದಗಿಸುತ್ತೇವೆ, ಆದರೆ, ವರ್ಷವೀಡಿ ಭದ್ರತೆ ಒದಗಿಸುವುದಕ್ಕೆ ಆಗುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ.
ಸಿಸಿಟಿವಿ ಅಳವಡಿಕೆ ಬೆಸ್ಕಾಂ ಜವಾಬ್ದಾರಿ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಮುರ್ಗೋಡು ಹೇಳುತ್ತಾರೆ. ಆದರೆ ಬೆಸ್ಕಾಂ, ಇದು ಬಿಬಿಎಂಪಿಯ ಕೆಲಸ . ವಿದ್ಯುತ್ ಪೂರೈಸುವುದಷ್ಟೇ ನಮ್ಮ ಎಂದು ಬೆಸ್ಕಾಂ ಡಿಜಿಎಂ ಲಕ್ಷ್ಮಿನಾರಾಯಣ್ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್. ಸಿಸಿಟಿವಿ ಅಳವಡಿಕೆ ತೋಟಗಾರಿಕೆ ಇಲಾಖೆ ಸೇರಿದ್ದಾಗಿದೆ ಎಂದು ಹೇಳುತ್ತಾರೆ.