ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶನಿವಾರ ಶಿಲಾನ್ಯಾಸ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಅವರು ‘‘ ಮಹಾದೇವನ ನಗರವಾದ ವಾರಣಾಸಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಕ್ರೀಡಾಂಗಣವನ್ನು ಮಹಾದೇವನಿಗೇ ಸಮರ್ಪಿಸಲಾಗುವುದು. ಕಾಶಿ(ವಾರಣಾಸಿ)ಯಲ್ಲಿ ಅಂತಾರಾಷ್ರೀಯ ಕ್ರೀಡಾಂಗಣದ ನಿರ್ಮಾಣದಿಂದ ಸ್ಥಳೀಯ ಕ್ರೀಡಾಳುಗಳು ಪ್ರಯೋಜನ ಪಡೆಯಲಿದ್ದಾರೆ.
ಈ ಕ್ರೀಡಾಂಗಣವು ಪೂರ್ವಾಂಚಲ ಪ್ರಾಂತದ ತಾರೆಯಾಗಲಿದೆ’’ ಎಂದು ಹೇಳಿದರು. ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್,ರವಿಶಾಸ್ತ್ರಿ, ಸುನಿಲ್ ಗಾವಸ್ಕರ್ ಹಾಗೂ ಕಪಿಲ್ ದೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಬಿಸಿಸಿ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಈ ಬ್ರಹತ್ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಬೇಕಾದ ಜಮೀನನ್ನು ಉತ್ತರಪ್ರದೇಶ ಸರಕಾರವು 121 ಕೋಟಿ ರೂ. ನೀಡಿ ಖರೀದಿಸಿತ್ತು. ಸುಮಾರು 330 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.
30 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಆಸನ ಸಾಮರ್ಥ್ಯದ ಈ ಕ್ರೀಡಾಂಗಣವು ಭಗವಾನ್ ಶಿವನ ಥೀಮ್ ಆನ್ನು ಆಧರಿಸಿ ನಿರ್ಮಾಣವಾಗಲಿದೆ. ಅರ್ಧಚಂದ್ರಾಕೃತಿಯ ಛಾವಣಿಯಿರಲಿದ್ದು, ತ್ರಿಶೂಲಾಕೃತಿಯ ಫ್ಲಡ್ ಲೈಟ್ ಇರಲಿದೆ. ಮೆಟ್ಟಲುಗಳ ವಿನ್ಯಾಸವು ವಾರಣಾಸಿ ಘಾಟ್ ಮಾದರಿಯಲ್ಲಿರುವುದು.
ಕ್ರೀಡಾಂಗಣದ ಮುಂಭಾಗಕ್ಕೆ ಭಗವಾನ್ ಶಿವನ ಪೂಜೆ ಅರ್ಪಿಸುವ ಬಿಲ್ವ ಮರದ ಎಲೆಯ ಆಕೃತಿಯ ಲೋಹದ ಶೀಟ್ ಗಳ ವಿನ್ಯಾಸವಿರಲಿದೆ.