ಪಾಟ್ನಾ: ಉತ್ತರಾಖಂಡ ಸರ್ಕಾರ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಯುಸಿಸಿ ಪರ- ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಈ ಬಗ್ಗೆ ಹೇಳಿಕೆ ನೀಡಿ, “ದೇಶದಲ್ಲಿ ಕಾನೂನುಗಳನ್ನು ರೂಪಿಸುವಾಗ ವಿವಿಧತೆಯಲ್ಲಿ ಏಕತೆಯನ್ನು ಉಳಿಸುವುದು ಅಗತ್ಯ” ಎಂದು ಪ್ರತಿಪಾದಿಸಿದ್ದಾರೆ.
ಈ ಮೊದಲು ಕೂಡಾ ಜೆಡಿಯು ಯುಸಿಸಿ ಜಾರಿಯನ್ನು ಬಲವಾಗಿ ವಿರೋಧಿಸಿತ್ತು. “ಉತ್ತರಾಖಂಡದಲ್ಲಿ ಏನನ್ನು ಅನುಷ್ಠಾನಗೊಳಿಸಲಾಗಿದೆಯೋ ಅದು ಆ ರಾಜ್ಯದ ವ್ಯಾಪ್ತಿಗೆ ಸಂಬಂಧಿಸಿದ್ದು. ಆದರೆ ರಾಷ್ಟ್ರಮಟ್ಟದಲ್ಲಿ ಇಂಥ ಸೂಕ್ಷ್ಮ ವಿಷಯಗಳನ್ನು ಕೇವಲ ರಾಜಕೀಯ ದೃಷ್ಟಿಯಿಂದ ಮಾತ್ರ ನೋಡದೇ ವಿವಿಧತೆಯಲ್ಲಿ ಏಕತೆಯ ದೃಷ್ಟಿಯಿಂದ ನೋಡಬೇಕು” ಎಂದು ಪಕ್ಷದ ಮುಖ್ಯ ವಕ್ತಾರ ನೀರಜ್ ಕುಮಾರ್ ಹೇಳಿದ್ದಾರೆ.
ಸಂವಿಧಾನ ರಚನಾ ಸಮಿತಿಯಲ್ಲಿ ವಿಸ್ತೃತ ಚರ್ಚೆಯ ಬಳಿಕ ಭೀಮರಾವ್ ಅಂಬೇಡ್ಕರ್ ಅವರು ವಿವಿಧತೆಯಲ್ಲಿ ಏಕತೆ ಎಂಬ ತಿರುಳನ್ನು ಒಪ್ಪಿಕೊಂಡಿದ್ದರು. ಇದು ಎಲ್ಲ ಸಮುದಾಯಗಳ ಸಂಪ್ರದಾಯಗಳನ್ನು, ವೈವಿಧ್ಯತೆಗಳನ್ನು ಒಳಗೊಂಡಿದ್ದು, ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವಂಥದ್ದು. ಸದ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಯುಸಿಸಿ ಬಗ್ಗೆ ಯವುದೇ ಚರ್ಚೆಗಳು ನಡೆದಿಲ್ಲವಾದರೂ, ಸಂಬಂಧಪಟ್ಟ ಎಲ್ಲರ ಜತೆ ಚರ್ಚಿಸಿ ಒಮ್ಮತಕ್ಕೆ ಬರುವ ಅಗತ್ಯವಿದೆ ಎಂದು ಸಲಹೆ ಮಾಡಿದರು.
ರಾಜಕೀಯ ಬಲ ಕಳೆದುಕೊಳ್ಳುವ ಭೀತಿಯಿಂದ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುವ ದಿಟ್ಟತನ ಸಂಯುಕ್ತ ಜನತಾದಳಕ್ಕೆ ಇಲ್ಲ ಎಂದು ಆರ್ಜೆಡಿ ವ್ಯಂಗ್ಯವಾಡಿದೆ. “ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿಯ ವಿವಾದಾತ್ಮಕ ನಿರ್ಧಾರಗಳನ್ನು ವಿರೋಧಿಸುವ ದಿಟ್ಟತನ ಜೆಡಿಯುಗೆ ಇಲ್ಲ. ಅದರ ಬದಲಾಗಿ ಅವರು ಕೇಸರಿ ಪಕ್ಷದ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಂತಿದೆ. ಪಾಲುದಾರ ಪಕ್ಷ ಏನು ಸೂಚಿಸುತ್ತದೆಯೋ ಅದನ್ನು ಮಾಡುತ್ತಿದ್ದಾರೆ” ಎಂದು ಆರ್ಜೆಡಿ ವಕ್ತಾರ ಎಜಾಝ್ ಅಹ್ಮದ್ ಹೇಳಿದ್ದಾರೆ. ಯುಸಿಸಿ ಭಾರತ ವಿರೋಧಿ ಮತ್ತು ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾದದ್ದು ಎಂದು ಅವರು ತಿಳಿಸಿದರು.