ಎಚ್ಡಿಕೆ ಕುಟುಂಬದಿಂದ ಸರಕಾರಿ ಜಮೀನು ಒತ್ತುವರಿ ಪ್ರಕರಣ : ‘ತನಿಖೆಗೆ ತಂಡ ರಚನೆ’ ಮೂರು ತಿಂಗಳಲ್ಲಿ ಕೋರ್ಟ್ಗೆ ವರದಿ ಸಲ್ಲಿಕೆ : ಕೃಷ್ಣಬೈರೇಗೌಡ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದವರಿಂದ ಕೇತಗಾನಹಳ್ಳಿಯಲ್ಲಿ ಸರಕಾರಿ ಜಮೀನು ಒತ್ತುವರಿ ಪ್ರಕರಣದ ತನಿಖೆಗೆ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ಹೈಕೋರ್ಟ್ ತೀಕ್ಷ್ಣವಾಗಿ ಸೂಚನೆಯನ್ನು ಕೊಟ್ಟಿದೆ. ಫೆಬ್ರವರಿ 21ರ ಒಳಗೆ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸುತ್ತೇನೆ ಎಂದರು.
ಸರಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ತನಿಖೆಗೆ ಮೂರು ತಿಂಗಳು ಸಮಯ ಕೇಳಿದ್ದೆವು. ಆದರೆ, ಕೋರ್ಟ್ ಸಮಯ ಕೊಡಲಿಲ್ಲ. ಹೀಗಾಗಿ ಕೋರ್ಟ್ ಕೊಟ್ಟಿರುವ ಅವಧಿಯಲ್ಲಿ ತನಿಖೆ ಮಾಡಿ ವರದಿ ಕೋರ್ಟ್ಗೆ ಸಲ್ಲಿಕೆ ಮಾಡುತ್ತೇವೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಶನಿವಾರ ಮಂಡನೆ ಆಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃಷ್ಣಬೈರೇಗೌಡ, ರಾಜ್ಯ ಸರಕಾರ ಈಗಾಗಲೇ ಕೇಂದ್ರಕ್ಕೆ ನಮ್ಮ ಬೇಡಿಕೆಗಳನ್ನು ಲಿಖಿತವಾಗಿ ಮತ್ತು ಮನವಿ ರೂಪದಲ್ಲಿ ಸಲ್ಲಿಸಿದ್ದೇವೆ ಎಂದರು.
ರಾಜ್ಯಕ್ಕೆ ಕೇಂದ್ರದ ಹಿಂದಿನ ಹಣಕಾಸು ಆಯೋಗ 11,495 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಲು ಶಿಫಾರಸು ಮಾಡಿತ್ತು. ಅದನ್ನು ಕೊಡಲಿಲ್ಲ. ಈ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5 ಸಾವಿರ ಕೋಟಿ ರೂ. ಹಣ ಕೊಡಬೇಕು. ಮೇಕೆದಾಟು ಯೋಜನೆ, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಕೊಡಬೇಕು. ಪಿಂಚಣಿ ಯೋಜನೆಗೆ ಕೇಂದ್ರ ಕೊಡುವ ಮೊತ್ತವನ್ನು ಹೆಚ್ಚಳ ಮಾಡಲು ಮನವಿ ಮಾಡಿದ್ದೇವೆ. ಪ್ರಧಾನಿಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಡಲು ಕೇಂದ್ರ ಕೊಡುವ ಹಣವನ್ನು ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಮಾಡುವವರಿಗೆ ಕೇಂದ್ರದ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕೃಷ್ಣಬೈರೇಗೌಡ ಹೇಳಿದರು.
ಘೋಷಿಸಿದ ಅನುದಾನ ಕೊಟ್ಟರೆ ಸಾಕು: ‘ಈ ಹಿಂದಿನ ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ. ಆದರೂ ಜನರ ಪರವಾಗಿ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡಿದ್ದೇವೆ. ನಮಗೆ ಹೊಸ ಅನುದಾನ ಕೊಡದೇ ಹೋದರೂ ಹಿಂದಿನ ವರ್ಷಗಳಲ್ಲಿ ಘೋಷಣೆ ಮಾಡಿರುವ ಅನುದಾನ ಕೊಟ್ಟರೆ ಸಾಕಾಗಿದೆ’
-ಕೃಷ್ಣಬೈರೇಗೌಡ ಕಂದಾಯ ಸಚಿವ