ಬೆಂಗಳೂರು: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಉತ್ತರಪ್ರದೇಶದಲ್ಲಿ ರಾತ್ರಿ 12 ಗಂಟೆಗೆ ಮಹಿಳೆಯರು ಆಭರಣಗಳನ್ನು ಧರಿಸಿಕೊಂಡು ಸುರಕ್ಷಿತವಾಗಿ ಓಡಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಆದರೆ, ಇವತ್ತು ಅಲ್ಲಿ ಹಾಡುಹಗಲೇ ಎನ್ಕೌಂಟರ್, ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿವೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಅಲ್ಕಾ ಲಾಂಬ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ. ಅವರ ಶಕ್ತಿ ಹೆಚ್ಚುತ್ತಿದೆ. ಮುಂಬೈನಲ್ಲಿ ವೈ ಶ್ರೇಣಿಯ ಭದ್ರತೆಯಿದ್ದ ಮಾಜಿ ಶಾಸಕ ಬಾಬಾ ಸಿದ್ದೀಕಿಯನ್ನು ಕೊಲೆ ಮಾಡಲಾಯಿತು. ಒಬ್ಬ ಅಪರಾಧಿ ಗುಜರಾತ್ನ ಜೈಲಿನಲ್ಲಿದ್ದುಕೊಂಡು ಇಡೀ ಗ್ಯಾಂಗ್ ನಿರ್ವಹಣೆ ಮಾಡುತ್ತಿದ್ದಾನೆ. ಜೈಲಿನಿಂದಲೆ, ಬೆದರಿಕೆಗಳು, ಕೊಲೆಗಳು ನಡೆಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಆ ಅಪರಾಧಿಯ ಬಗ್ಗೆ ವಿದೇಶಗಳಲ್ಲಿರುವ ರಾಯಭಾರಿ ಕಚೇರಿಗಳಲ್ಲಿ ಚರ್ಚೆಗಳು ಆಗುತ್ತಿವೆ. ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರಕಾರಗಳು ಆಡಳಿತ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಬಿಜೆಪಿ ನಾಯಕರು ಅಪರಾಧಿಗಳ ಬೆಂಬಲವಾಗಿ ನಿಂತಿದ್ದಾರೆ. ಕಾಟಾಚಾರಕ್ಕೆ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅಲ್ಕಾ ಲಾಂಬ ದೂರಿದರು.