ನಾಳೆಯಿಂದ ಮೇಕ್ ಆರ್ ಬ್ರೇಕ್ ವೀಕ್ ಆರಂಭ; ಏ.11ಕ್ಕೆ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಮತ್ತೊಮ್ಮೆ ಸಭೆ
ನವದೆಹಲಿ: ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಲಾಕ್ಡೌನ್ ಕೊನೆ ವಾರದಲ್ಲಿ ಮತ್ತೊಂದು ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಾಳೆಯಿಂದ ‘ಮೇಕ್ ಆರ್ ಬ್ರೇಕ್ ವೀಕ್’ ಆರಂಭವಾಗಲಿದ್ದು, ದೇಶಾದ್ಯಂತ ಭರದಿಂದ ಕೊರೋನಾ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಹೆಚ್ಚಿಸುವ ಮೂಲಕ ಸೋಂಕಿತರನ್ನು ಆದಷ್ಟು ಬೇಗ ಪತ್ತೆ ಮಾಡುವುದು ಈ ವಾರದ ಪ್ರಮುಖ ಗುರಿಯಾಗಿದೆ. ಸೋಂಕು ಹರಡುವಿಕೆ ಕಡಿಮೆಯಾದರಷ್ಟೇ ಲಾಕ್ಡೌನ್ಗೆ ಬ್ರೇಕ್ ಬೀಳಲಿದೆ. ಇಲ್ಲವಾದಲ್ಲಿ ಏಪ್ರಿಲ್ 14ರ ನಂತರವೂ ಲಾಕ್ಡೌನ್ ಮುಂದುವರೆಸಬೇಕಾಗಿ ಬರಬಹುದು.
ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.11ರಂದು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ವೇಳೆ ಲಾಕ್ಡೌನ್ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಅಭಿಪ್ರಾಯ ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಮಾರಕ ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದರಿಂದ ಪ್ರಸ್ತುತ ವಿಧಿಸಲಾಗಿರುವ ಲಾಕ್ಡೌನ್ಅನ್ನು ಇನ್ನಷ್ಟು ದಿನಗಳ ಕಾಲ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯಗಳು ಮನವಿ ಮಾಡಿವೆ. ತೆಲಂಗಾಣ, ಪುದುಚೇರಿ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್ಗಢ, ಜಾರ್ಖಂಡ್ನಲ್ಲಿ ಲಾಕ್ಡೌನ್ ಮುಂದುವರೆಸುವಂತೆ ಆಯಾ ರಾಜ್ಯ ಸರ್ಕಾರಗಳು ಮನವಿ ಮಾಡಿವೆ. ಈ ವಿಷಯವಾಗಿ ಉಳಿದ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯಲು ಪ್ರಧಾನಿ ಮೋದಿ ಅವರು ಏಪ್ರಿಲ್ 11ರಂದು ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ಸುತ್ತಿನ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯದವರೆಗೆ ಕರ್ನಾಟಕದಲ್ಲಿ ಲಾಕ್ಡೌನ್ ಮುಂದುವರೆಸುವುದು ಅಗತ್ಯ ಎಂದು ಕೋವಿಡ್-19 ಟಾಸ್ಕ್ಫೋರ್ಸ್ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. “ಲಾಕ್ಡೌನ್ ಆದೇಶ ಇಡೀ ರಾಜ್ಯಕ್ಕೆ ಅನ್ವಯಿಸಬೇಕಿಲ್ಲ. ಆದರೆ, ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸುವುದು ಉತ್ತಮ,” ಎಂದು ರಾಜ್ಯ ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ.