ವಿವಿಧ ಇಂದಿರಾ ಕ್ಯಾಂಟೀನ್ಗಳಿಗೆ ಸಿದ್ದರಾಮಯ್ಯ ಭೇಟಿ: ‘ಉಚಿತ ಊಟದ ಸೇವೆ ಮುಂದುವರಿಸಿ‘ ಎಂದು ಸಿಎಂಗೆ ಒತ್ತಾಯ
ಹೋರಾಟಕ್ಕಾಗಿ ಇಡೀ ರಾಜ್ಯ ಲಾಕ್ಡೌನ್ ಮಾಡಿದ ಕಾರಣ ಬೀದಿ ಬದಿ ನಿರ್ಗತಿಕರು, ಭಿಕ್ಷುಕರು ಊಟವಿಲ್ಲದೇ ಪರದಾಡುತ್ತಿದ್ದರು. ಅಂತವರಿಗೆ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಅದರಂತೆಯೇ ಒಂದು ವಾರಗಳ ಕಾಲ ಇಂದಿರಾ ಕ್ಯಾಂಟೀನ್ನಲ್ಲಿ ಬಡವರಿಗೆ ಉಚಿತ ಊಟ ನೀಡಲಾಗುತ್ತಿತ್ತು. ಆದರೆ, ದಿಢೀರ್ ಇದು ಮಿಸ್ಯೂಸ್ ಆಗುತ್ತಿದೆ ಎಂದು ಸರ್ಕಾರ ಈ ಸೇವೆಯನ್ನು ಭಾನುವಾರದಿಂದ ರದ್ದುಗೊಳಿಸಿದೆ. ಹಾಗಾಗಿ ಜನ ಎಂದಿನಂತೆಯೇ ಈಗ ಇಂದಿರಾ ಕ್ಯಾಂಟೀನ್ನಲ್ಲಿ ಹಣ ಊಟ ತಿನ್ನಬೇಕಿದೆ.
ಹೀಗೆ ಆರೋಪಿಸಿ ರಾಜ್ಯ ಸರ್ಕಾರ ಉಚಿತ ಊಟದ ಸೇವೆ ರದ್ದುಗೊಳಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವಿವಿಧ ಬಡಾವಣೆಗಳ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ್ದರು. ವಸಂತನಗರ, ಹೆಬ್ಬಾಳ ಹಾಗೂ ಆರ್.ಟಿ ನಗರ ಬಡಾವಣೆಯ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಜತೆಗೆ ಶಾಸಕ ಬೈರತಿ ಸುರೇಶ್ ಕೂಡ ಇದ್ದರು. ಇಬ್ಬರು ನಾಯಕರು ಇಲ್ಲಿನ ಪರಿಸ್ಥಿಯನ್ನು ಅವಲೋಕಿಸಿ ಏನಾಗಿದೆ ಎಂದು ಚರ್ಚೆ ನಡೆಸಿದರು.
ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ ಬಳಿಕ ಮಾತಾಡಿದ ಸಿದ್ದರಾಮಯ್ಯ, ಉಚಿತ ಊಟ-ತಿಂಡಿ ನೀಡುತ್ತಿದ್ದಾಗ ಸುಮಾರು 600-700 ಜನ ಊಟ ತಿನ್ನುತ್ತಿದ್ದರಂತೆ. ಆದರೀಗ, ಸರ್ಕಾರ ಉಚಿತ ಊಟದ ಸೇವೆ ರದ್ದುಗೊಳಿಸಿದ ಕೇವಲ 150 ಮಂದಿ ಮಾತ್ರ ಇಂದಿರಾ ಕ್ಯಾಂಟೀನ್ಗೆ ಬರುತ್ತಿದ್ದಾರೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಇದರರ್ಥ ಜನರ ಬಳಿ ದುಡ್ಡಿಲ್ಲದಿರುವುದು. ಹಾಗಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುನರ್ ಪರಿಶೀಲಸಿ ಈ ಸೇವೆ ಮತ್ತೆ ಮುಂದುವರಿಸಲಿ ಎಂದು ಒತ್ತಾಯಿಸಿದರು.
ನಿನ್ನೆಯಷ್ಟೇ ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಷಯದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ದರಾಮಯ್ಯ ಜತೆಗೆ ದೂರವಾಣಿ ಮೂಲಕ ಇಂದು ಮಾತುಕತೆ ನಡೆಸಿದರು. ಊಟ, ತಿಂಡಿ ನಿಲ್ಲಿಸಿರುವ ಕುರಿತು ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ದೂರವಾಣಿ ಕರೆ ಮಾಡಿ, ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ದುರುಪಯೋಗವಾದ ಕಾರಣ ದರ ನಿಗದಿ ಮಾಡಿರುವುದಾಗಿ ತಿಳಿಸಿದರು.
ದುರುಪಯೋಗವಾಗದಂತೆ ಊಟ, ತಿಂಡಿಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ನೀಡಿ. ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ಮಾತುಕತೆ ವೇಳೆ ಸಿದ್ದರಾಮಯ್ಯಗೆ ತಿಳಿಸಿದರು.