ನಾಳೆ, ನಾಡಿದ್ದು ರಾಜ್ಯದಲ್ಲಿ ದಾಖಲಾಗಲಿವೆ ಅತೀ ಹೆಚ್ಚು ಕೊರೋನಾ ಪ್ರಕರಣಗಳು; ಆರೋಗ್ಯ ಇಲಾಖೆ ಬಿಚ್ಚಿಟ್ಟ ಮಾಹಿತಿ
ಬೆಂಗಳೂರು: ಮಾರಕ ಸೋಂಕು ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಈಗಾಗಲೆ ರಾಜ್ಯದಲ್ಲಿ 165 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ನಡುವೆ ನಾಳೆ, ನಾಡಿದ್ದು ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಲಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೊರೋನಾ ವೈರಸ್ ವಿಚಾರವಾಗಿ ಮಾತನಾಡಿದ ಆರೋಗ್ಯ ಇಲಾಖೆ ಹಿರಿಯ ಆರೋಗ್ಯಾಧಿಕಾರಿ ಡಾ.ಬಿ.ಜಿ.ಪ್ರಕಾಶ್ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳು ಹೆಚ್ಚಳವಾಗುತ್ತಲೇ ಇವೆ. ಆದರೆ ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಈಗ ನಾವು ಈ ಪ್ರಕರಣಗಳನ್ನು ಎರಡು ಕೋನಗಳಲ್ಲಿ ನೋಡಬೇಕು. ಒಂದು ಟಿಜೆ ಕೇಸ್ ಮತ್ತೊಂದು ಮೈಸೂರು ಫ್ಯಾಕ್ಟರಿ ಕೇಸ್. ಈಗ ಟಿಜೆ ಕೇಸ್ ಗಳು ಸ್ಟೆಪ್ ಬೈ ಸ್ಟೆಪ್ ಕ್ಲಿಯರ್ ಆಗ್ತಿದೆ. ಇನ್ನೆರಡು ದಿನಗಳಲ್ಲಿ ಟಿಜೆ ಕೇಸ್ ಗಳು ಕ್ಲಿಯರ್ ಆಗುತ್ತೆ. ಟಿಜೆ ಕೇಸ್ ಹುಡುಕಿ, ಈಗಾಗಲೇ ರಿಪೋರ್ಟ್ ಕಳುಹಿಸಲಾಗಿದೆ. ಈ ಎಲ್ಲಾ ವರದಿಗಳು ಎರಡು ದಿನಗಳಲ್ಲಿ ಸಿಗುತ್ತದೆ. ಮೈಸೂರು ಫ್ಯಾಕ್ಟರಿ ಕೇಸ್ ಕೂಡ ಹುಡುಕಲಾಗಿದ್ದು, ಇನ್ನೆರಡು ದಿನಗಳಲ್ಲಿ ವರದಿ ಕೈ ಸೇರಲಿದೆ. ಹೀಗಾಗಿ ಮುಂಬರುವ ಎರಡು ದಿನಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂಬ ಆತಂಕಕಾರಿ ವಿಷಯ ಹೇಳಿದ್ದಾರೆ.
ಹೋಂ ಕ್ವಾರಂಟೈನ್ ಮುಗಿಸಿರುವವರ ವರದಿಯನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಪ್ರಾಥಮಿಕ ಸಂಪರ್ಕಗಳ ವರದಿ ಕೂಡ ಈಗ ಮುಖ್ಯ. ಅವರ ವರದಿ ತೆಗೆಯುತ್ತಿರುವ ಕಾರಣ ಪ್ರಕರಣಗಳು ಹೆಚ್ಚು ದಾಖಲಾಗಬಹುದು. ಇವರಲ್ಲಿ ಕೆಲವರಿಗೆ ಕೋವಿಡ್ 19 ಪಾಸಿಟಿವ್ ಇರುವ ಸಾಧ್ಯತೆ ಇದೆ. ಹೈರಿಸ್ಕ್ ಕಾಂಟ್ಯಾಕ್ಟ್ ನಮಗೆ ಈ ಹೊತ್ತಿನಲ್ಲಿ ಹೆಚ್ಚು ಪ್ರಾಮುಖ್ಯ. ಸೆಕೆಂಡರಿ ಕಾಂಟ್ಯಾಕ್ಟ್ ಬಗ್ಗೆ ನಾವು ಹೆಚ್ಚು ಗಮನ ಕೊಡ್ತಿಲ್ಲ. ಅದರ ಅವಶ್ಯಕತೆಯೂ ಸದ್ಯಕ್ಕಿಲ್ಲ ಎಂದು ಹೇಳಿದರು.