ಬೆಂಗಳೂರು: ನಾಲ್ವರು ಮಕ್ಕಳು ಮಂಗಳವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು. ಪೊಲೀಸ್ ಆಯುಕ್ತರ ಜೊತೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರವನ್ನು ಅನಾವರಣಗೊಳಿಸಿದರು.
ಇದು ವಿಶ್ವ ಕ್ಯಾನ್ಸರ್ ದಿನವಾದ ಮಂಗಳವಾರ(ಫೆ.4) ಕಿಡ್ಸ್ ವಾರಿಯರ್ಸ್ (ಪೀಡಿಯಾಟ್ರಿಕ್ ಕ್ಯಾನ್ಸರ್ ಮಕ್ಕಳ) ಕನಸುಗಳನ್ನು ನನಸಾಗಿಸಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಆಯೋಜಿಸಿದ ಮಾನವೀಯ ಕಾರ್ಯಕ್ರಮವಾಗಿದೆ.
ಪರಿಹಾರ್ ಮತ್ತು ಕಿಡ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಹಯೋಗದಲ್ಲಿ ನಗರ ಪೊಲೀಸ್ ಆಯುಕ್ತಾಲಯ ಈ ಕಾರ್ಯಕ್ರಮ ಆಯೋಜಿಸಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿರುವ 12ರಿಂದ 14 ವರ್ಷದೊಳಗಿನ ವಿಶ್ವಾಸ್, ಜೀವನ್ ಕುಮಾರ್, ದಾನಮ್ಮ ಮತ್ತು ದಿವ್ಯಶ್ರೀ ಎಂಬ ಮಕ್ಕಳು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ‘ಒಂದು ದಿನದ ಪೊಲೀಸ್ ಅಧಿಕಾರಿ’ಯಾಗಿ ಸೇವೆ ಸಲ್ಲಿಸುವ ಅಪರೂಪದ ಅನುಭವ ಪಡೆದರು.
ಪೊಲೀಸ್ ಸಮವಸ್ತ್ರ ಧರಿಸಿ ಬಂದ ನಾಲ್ವರು ಮಕ್ಕಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಖುದ್ದು ಹೂಗುಚ್ಛ ನೀಡಿ ತಮ್ಮ ಕಚೇರಿಗೆ ಸ್ವಾಗತಿಸಿದರು. ಬಳಿಕ ತಮ್ಮ ಪಕ್ಕದಲ್ಲೇ ಮಕ್ಕಳನ್ನು ಕೂರಿಸಿಕೊಂಡು ವಾಹನ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿ ನಡೆಸಿದರು. ಮಕ್ಕಳ ಜೊತೆಗೂಡಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ನಾಲ್ವರು ಮಕ್ಕಳಿಗೆ ಸ್ಮರಣಿಕೆ ನೀಡಿದರು.
ಇದಕ್ಕೂ ಮೊದಲು ಈ ನಾಲ್ವರು ಮಕ್ಕಳು ಪೊಲೀಸ್ ಅಧಿಕಾರಿಗಳ ಸಮವಸ್ತ್ರದಲ್ಲಿ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ಕ್ಕೆ ಭೇಟಿ ನೀಡಿದರು. ಈ ವೇಳೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಸೇರಿ ಸಂಚಾರ ಪೊಲೀಸರು ಗೌರವ ವಂದನೆ ಸಲ್ಲಿಸಿ ಮಕ್ಕಳನ್ನು ಬರ ಮಾಡಿಕೊಂಡರು. ಬಳಿಕ ಸಂಚಾರ ಪೊಲೀಸ್ ವಿಭಾಗದ ನೂತನ ವಸ್ತು ಸಂಗ್ರಹಾಲಯಕ್ಕೆ ಕರೆದೊಯ್ದು ವಸ್ತು ಸಂಗ್ರಹಾಲಯದ ಬಗ್ಗೆ ಮಾಹಿತಿ ನೀಡಿದರು.