ಬೆಂಗಳೂರು: ಹಿಂದುಳಿದ ವರ್ಗಗಳ ಕರ್ನಾಟಕ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ನೀಡುವ ವಿ.ಪಿ.ಸಿಂಗ್ ಪ್ರಶಸ್ತಿಗೆ ಸಾಹಿತಿ ಡಾ.ಕೆ. ಷರೀಫಾ ಸಹಿತ ಐದು ಜನರು ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಗಂಧರ್ವ ಸೇನಾ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವರದಿಗಾರರಾಗಿ, ವಿಶೇಷ ವರದಿಗಾರರಾಗಿ, ಸಂಪಾದಕರಾಗಿ ಗಣನೀಯ ಸೇವೆ ಸಲ್ಲಿಸಿರುವ ಐ.ಎಚ್.ಸಂಗಮದೇವ, ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿರುವ ನಳಿನಾಕ್ಷಿ ಸಣ್ಣಪ್ಪ, ಸಾಮಾಜಿಕ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಎಂ.ನಾಗವೇಣಿ, ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಭಾಷಾ ಪತ್ರಿಕೆ ಆರಂಭಿಸಿ, ಶೋಷಿತರ ಧ್ವನಿಯಾಗಿರುವ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಶಿವಲಿಂಗಪ್ಪ ಅವರುಗಳಿಗೆ ವಿ.ಪಿ.ಸಿಂಗ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ತಿಂಗಳ 15ರಂದು ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಗಂಧರ್ವ ಸೇನಾ ತಿಳಿಸಿದ್ದಾರೆ.