ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ: ಶಾಸಕ ಎನ್ಹೆಚ್ ಕೋನರೆಡ್ಡಿ – Kannada News | Work on Mahadayi project will start tomorrow if Union Forest Department gives clearance: MLA NH Konareddy
ನಾವು ಮಹದಾಯಿ ಯೋಜನೆ ಜಾರಿ ಆಗಲಿ ಎನ್ನುವವರು. ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆತ್ಮೀಯರು. ಯೋಜನೆಗೆ ಅನುಮತಿ ಕೊಡಿಸುವುದು ಅವರಿಗೆ ದೊಡ್ಡ ಕೆಲಸವಲ್ಲ. ಒಂದು ವೇಳೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭವಾಗಲಿದೆ ಎಂದು ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದ್ದಾರೆ.
ಶಾಸಕ ಎನ್.ಹೆಚ್.ಕೋನರೆಡ್ಡಿ
ಧಾರವಾಡ, ಆಗಸ್ಟ್ 10: ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭವಾಗಲಿದೆ ಎಂದು ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ (NH Konaraddi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮಹದಾಯಿ ಯೋಜನೆ ಜಾರಿ ಆಗಲಿ ಎನ್ನುವವರು. ಪ್ರಧಾನಿ ನರೇಂದ್ರ ಮೋದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆತ್ಮೀಯರು. ಯೋಜನೆಗೆ ಅನುಮತಿ ಕೊಡಿಸುವುದು ಅವರಿಗೆ ದೊಡ್ಡ ಕೆಲಸವಲ್ಲ ಎಂದಿದ್ದಾರೆ.
ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ ಎಂದ ಎನ್.ಹೆಚ್.ಕೋನರೆಡ್ಡಿ
ರಾಜ್ಯದ ಹಿತಕ್ಕಾಗಿ ಅನುಮತಿ ಕೊಡಿಸಬೇಕು. ಬೇಕಾದರೆ ಅದರ ಕ್ರೆಡಿಟ್ನ್ನು ನೀವೇ ತೆಗೆದುಕೊಳ್ಳಿ. ಲೋಕಸಭಾ ಚುನಾವಣೆ ಮೊದಲು ಇದನ್ನು ಮಾಡಲಿ. ಗೋವಾ ಆಟ ಈಗ ಏನು ನಡೆಯೋದಿಲ್ಲ. ಮಹದಾಯಿ ನ್ಯಾಯಾಧೀಕರಣದ ತೀರ್ಪು ನಮ್ಮಂತೆ ಆಗಿದೆ ಎಂದರು.
ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಶುರು
ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಸೂಚನೆ ಹೊರಡಿಸಿದ್ದೇವೆ. ಡಿಪಿಆರ್ಗೆ ಅನುಮತಿ ಆಗಿದೆ. ಕೇಂದ್ರದ ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಶುರುವಾಗುವುದು ಮಾತ್ರ ಬಾಕಿ ಇದೆ. ನಾವು ನ್ಯಾಯಾಧೀಕರಣಕ್ಕೆ 33.46 ಟಿಎಂಸಿ ನೀರು ಕೇಳಿದ್ದೇವೆ. ಆದರೆ ನಮಗೆ ಕೊಟ್ಟಿದ್ದು 13.46 ಟಿಎಂಸಿ. ಹೆಚ್ಚು ನೀರು ಪಡೆಯಲು ನಾವು ಟ್ರಿಬ್ಯುನಲ್ ಎದುರು ಹೋರಾಟ ಮಾಡಲೇಬೇಕು ಎಂದು ತಿಳಿಸಿದರು.
ಬಿಜೆಪಿ ನಾಯಕರ ಆರೋಪ ಎದುರಿಸಲು ನಾವು ಗಟ್ಟಿಯಾಗಿದ್ದೇವೆ
ಗುತ್ತಿಗೆದಾರರಿಂದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ವಿಚಾರವಾಗಿ ಅವರು ಮಾತನಾಡಿ, ಅಧಿಕಾರಕ್ಕೆ ಬಂದು 2 ತಿಂಗಳಾಯ್ತು, ಇನ್ನೂ ಯಾವ ಟೆಂಡರ್ ಕರೆದಿಲ್ಲ. ಬಿಜೆಪಿ ನಾಯಕರ ಆರೋಪ ಎದುರಿಸಲು ನಾವು ಗಟ್ಟಿಯಾಗಿದ್ದೇವೆ ಎಂದರು.
ಡಿಕೆ ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ಹೊಟ್ಟೆಕಿಚ್ಚು. ಡಿಸಿಎಂ ಬ್ರ್ಯಾಂಡ್ ಬೆಂಗಳೂರು ಎಂದು ಮಾಡುತ್ತಿದ್ದಾರೆ. ಅದನ್ನು ನೋಡಿ ಇವರು ಆರೋಪ ಮಾಡುತ್ತಿದ್ದಾರೆ. ಕೃಷಿ ಸಚಿವರ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಗಿದೆ. ನಕಲಿ ಪತ್ರ ಎಂದು ಕೃಷಿ ಅಧಿಕಾರಿಗಳೇ ಹೇಳಿದ್ದಾರೆ ಎಂದು ಹೇಳಿದ್ದಾರೆ.