‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯಾತ್ರೆಗೆ ಬಿಹಾರದ ಗಯಾ ಕ್ಷೇತ್ರ ಸೇರ್ಪಡೆ: ಸಹಾಯ ಧನ ಹೆಚ್ಚಳ – Kannada News | Bihar’s Gaya Kshetra added to ‘Karnataka Bharat Gaurav Kashi Darshan’ Yatra: Increase in grant
ಕರ್ನಾಟಕದ ಜನರಿಗೆ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನಕ್ಕೆ ಅನುಕೂಲ ಒದಗಿಸುತ್ತಿರುವ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ರೈಲು ಯಾತ್ರೆಯಲ್ಲಿ ಈಗಾಗಲೇ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಪುಣ್ಯ ಕ್ಷೇತ್ರಗಳ ಸಾಲಿಗೆ ಇದೀಗ ಬಿಹಾರದ ಗಯಾ ಕ್ಷೇತ್ರ ಕೂಡ ಸೇರ್ಪಡೆಗೊಳಿಸಲಾಗಿದೆ. ಜತೆಗೆ ಸಹಾಯ ಧನ 5000 ರೂ ಯಿಂದ 7500 ರೂ. ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಬೆಂಗಳೂರು, ಆಗಸ್ಟ್ 09: ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Karnataka Bharat Gaurav Kashi Darshan) ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ಗಳ ಸಾಲಿಗೆ ಇದೀಗ ಬಿಹಾರದ ಗಯಾ ಕ್ಷೇತ್ರ ದರ್ಶನವನ್ನು ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್ಗೆ ಈ ಹಿಂದೆ ಸರ್ಕಾರದಿಂದ ನಿಗದಿ ಮಾಡಲಾಗಿದ್ದ ಸಹಾಯ ಧನ ರೂ.5000/- ಗಳ ಮೊತ್ತವನ್ನು ರೂ.7500 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ ಎಲ್ಹೆಚ್ಬಿ ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆ ಸೇವಾ ನಿರತರಾಗಿರುತ್ತಾರೆ.
ಆಗಸ್ಟ್ 29 ರಂದು 5ನೇ ಪ್ರವಾಸ ಹೊರಡಲಿದ್ದು, ಸೆಪ್ಟೆಂಬರ್ 06ರಂದು ವಾಪಸ್ಸ್ ಆಗಮಿಸಲಿದೆ. ಬಳಿಕ ಸೆಪ್ಟೆಂಬರ್ 23ರಂದು ಆರನೇ ಟ್ರಿಪ್ ಹೊರಟು, ಅಕ್ಟೋಬರ್ 02 ರಂದು ವಾಪಸ್ಸ್ ಆಗಲಿದ್ದಾರೆ. ಸದರಿ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದೆ.
ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆಯಲಾಗಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆರವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ‘ತಸ್ತಿಕ್ʼ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ.
Published On – 8:05 pm, Wed, 9 August 23