ಬೆಂಗಳೂರಿನಲ್ಲಿ ಶೌಚಾಲಯಗಳ ದುಸ್ಥಿತಿಗೆ ಕರ್ನಾಟಕ ಹೈಕೋರ್ಟ್ ಅಸಮಾಧಾನ – Kannada News | Karnataka High Court upset over poor state of toilets in Bengaluru, Continuation of appointment of Judge as Administrative Officer for Muruga Mutt
Karnataka High Court Veridict; ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಒದಗಿಸುವ ವಿಚಾರವಾಗಿ 3 ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ‘ಲೆಟ್ಜ್ ಕಿಟ್ ಫೌಂಡೇಶನ್’ ಸಂಸ್ಥೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು.
ಕರ್ನಾಟಕ ಹೈಕೋರ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಶೌಚಾಲಯಗಳ ದುಃಸ್ಥಿತಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಶೌಚಾಲಯಗಳ (Toilets) ಸ್ಥಿತಿಗತಿ ಬಗ್ಗೆ ಅಸಮರ್ಪಕ ವರದಿಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಸಾರ ಶೌಚಾಲಯಗಳಿಲ್ಲ. ವಿಕಲ ಚೇತನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಲ ಮಹಿಳಾ ಶೌಚಾಲಯಗಳ ಕಿಟಕಿಯೇ ಕಿತ್ತುಹೋಗಿದೆ. ಶೌಚಾಲಯದ ನೈರ್ಮಲ್ಯ ಕಾಪಾಡಲು ಬಿಬಿಎಂಪಿ ಕ್ರಮ ವಹಿಸಿಲ್ಲ ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಂಬಂಧ ಸಂಬಂಧ ಸರ್ಕಾರ ತನ್ನ ನಿಲುವು ತಿಳಿಸದೇ ಸುಮ್ಮನಿದೆ. ರಾಜ್ಯ ಸರ್ಕಾರ ಕಣ್ಣು, ಬಾಯಿ ಮುಚ್ಚಿ ಕೂರಬಾರದು. ಜನರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ ತನ್ನ ಹೊಣೆಯಿಂದ ಹಿಂದೆ ಸರಿಯಬಾರದು ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂಜಿಎಸ್ ಕಮಲ್ ಅರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಒದಗಿಸುವ ವಿಚಾರವಾಗಿ 3 ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ‘ಲೆಟ್ಜ್ ಕಿಟ್ ಫೌಂಡೇಶನ್’ ಸಂಸ್ಥೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು.
ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ ಪ್ರಶ್ನಿಸಿ ಪಿಐಎಲ್; ರಾಜ್ಯ ಸರ್ಕಾರಕ್ಕೆ ನೋಟಿಸ್
2021ರ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಪಿಐಎಲ್ನ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಅಕ್ರಮ ಧಾರ್ಮಿಕ ಕಟ್ಟಡ ತೆರವಿಗೆ ಸುಪ್ರೀಂ ಆದೇಶವಿದೆ. 2009ರ ಸೆಪ್ಟೆಂಬರ್ 29ರ ತೀರ್ಪಿನ ನಂತರ ನಿರ್ಮಾಣವಾಗಿರುವ ಅಕ್ರಮ ಧಾರ್ಮಿಕ ಕಟ್ಟಡಕ್ಕೆ ಅವಕಾಶವಿಲ್ಲ. ಆದರೆ 2021ರ ಕಾಯ್ದೆ ಮೂಲಕ ಅಕ್ರಮ ಧಾರ್ಮಿಕ ಕಟ್ಟಡ ರಕ್ಷಿಸಲು ಸರ್ಕಾರ ಯತ್ನಿಸಿದೆ ಎಂದು, ಸರ್ಕಾರದ ಕ್ರಮ ಪ್ರಶ್ನಿಸಿ ಡಿ.ಕೇಶವಮೂರ್ತಿ ಎಂಬವರು ಪಿಐಎಲ್ ಸಲ್ಲಿಸಿದ್ದರು.
ಈ ಸಂಬಂಧ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನ್ಯಾಯಾಧೀಶರ ನೇಮಕ ಮುಂದುವರಿಕೆ
ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನ್ಯಾಯಾಧೀಶರ ನೇಮಕವನ್ನು ಹೈಕೋರ್ಟ್ ಮುಂದುವರಿಕೆ ಮಾಡಿದೆ. ಆಗಸ್ಟ್ 18 ರವರೆಗೆ ಮಧ್ಯಂತರ ಆದೇಶವನ್ನು ವಿಸ್ತರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆಡಳಿತಾಧಿಕಾರಿಯಾಗಿ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಿ ಹೈಕೋರ್ಟ್ ಈ ಹಿಂದೆ ಮಧ್ಯಂತರ ಆದೇಶ ನೀಡಿತ್ತು.
ಆ ಆದೇಶಕ್ಕೆ ಮಠದ ಪರ ವಕೀಲರಿಂದ ಆಕ್ಷೇಪಿಸಿದ್ದರು. ಶಾಖಾ ಮಠದ ಸ್ವಾಮೀಜಿ ಉಸ್ತುವಾರಿಯಾಗುವುದು ಸೂಕ್ತವೆಂದು ವಾದಿಸಿದ್ದರು. ಮಠದ ಹೊರಗಿನವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲು ಕಾನೂನುಬದ್ಧತೆ ಬಗ್ಗೆ ಪರಿಶೀಲಿಸಬೇಕಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯಾಗಿ ನ್ಯಾಯಾಧೀಶರ ನೇಮಕ ಮುಂದುವರಿಕೆ ಮಾಡಲಾಗುತ್ತಿದೆ ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂಜಿಎಸ್ ಕಮಲ್ ಅವರಿದ್ದ ಪೀಠ ಆದೇಶ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:55 pm, Tue, 8 August 23