ಬೆಂಗಳೂರು, ಮೇ.24: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,000ದ ಗಡಿ ದಾಟಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 97 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದ ನಂಜು ಕರ್ನಾಟಕಕ್ಕೆ ಮತ್ತೆ ಮತ್ತೆ ಮುಳುವಾಗುತ್ತಿದೆ. ಇಂದು ರಾಜ್ಯದಲ್ಲಿ ಪತ್ತೆಯಾದ 97 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಲ್ಲಿ 75 ಮಂದಿಗೆ ಮಹಾರಾಷ್ಟ್ರದ ನಂಟು ಇರುವುದು ತಿಳಿದು ಬಂದಿದೆ.
ಭಾನುವಾರದ ಬೆಳಗ್ಗಿನ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ರಿಲೀಫ್ ಕೊಟ್ಟಿದೆ. ಬಹುದಿನಗಳ ನಂತರದಲ್ಲಿ ಸಿಲಿಕಾನ್ ಸಿಟಿಯಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗದಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿಕ್ಕಬಳ್ಳಾಪುರ -26, ಉಡುಪಿ – 18, ಮಂಡ್ಯ – 15, ಹಾಸನ – 14, ಯಾದಗಿರಿ – 6, ಕಲಬುರಗಿ – 6, ದಾವಣಗೆರೆ – 4, ತುಮಕೂರು – 2, ಉತ್ತರ ಕನ್ನಡ -2, ದಕ್ಷಿಣ ಕನ್ನಡ -1, ಕೊಡಗು – 1, ವಿಜಯಪುರ -1, ಧಾರವಾಡ – 1 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.