ಬೆಂಗಳೂರು, ಮೇ.29: ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಲಬುರಗಿ ಶಾಸಕ ದತ್ತಾತ್ರೇಯ ರೇವೂರು ವಿರುದ್ಧ ಕ್ರಮ ಜರುಗಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಲಬುರಗಿಯ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ್ ಸಂಗ ಅವರಿಗೆ ವರ್ಗಾವಣೆಯ ಬೆದರಿಕೆಯೊಡ್ಡಿ ಹಣಕ್ಕಾಗಿ ಪೀಡಿಸಿದ ಶಾಸಕ ದತ್ತಾತ್ರೇಯ ರೇವೂರ ವಿರುದ್ಧ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶಾಸಕ ದತ್ತಾತ್ರೇಯ ಅವರು ತಾನು ಬೆದರಿಕೆಯೊಡ್ಡಿದ್ದು ಮಾತ್ರವಲ್ಲ ಹಾದಿಮನಿ ಎಂಬ ಕಾರ್ಪೋರೇಟರ್ನಿಂದಲೂ ಬೆದರಿಕೆ ಹಾಕಿಸಿದ್ದಾರೆ. ಇದು ಭ್ರಷ್ಟಾಚಾರ ಎಸಗಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಗಂಭೀರ ಆರೋಪವಾಗಿದೆ. ಈ ಬಗ್ಗೆ ಅಧಿಕಾರಿ ರಮೇಶ್ ಸಂಗ ನೀಡುವ ದೂರನ್ನು ದಾಖಲಿಸಿ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.
‘ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ಗೆ ಮಾತನಾಡಿದ್ದೇನೆ. ರಮೇಶ್ ಸಂಗ ಅವರ ದೂರನ್ನು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಬೆದರಿಕೆ ಹಾಕಿದ ಕಾರ್ಪೋರೇಟರನ್ನು ಸಹ ಬಂಧಿಸುವಂತೆ ತಿಳಿಸಿದ್ದೇನೆ’ ಎಂದರು.