ಏಪ್ರಿಲ್ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ – ರಾಜ್ಯ ಸರ್ಕಾರ
ಬೆಂಗಳೂರು(ಏ.21): ಕೊರೋನಾ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಉಚಿತ ಹಾಲು ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಸ್ತರಿಸಿ ಆದೇಶಿಸಿದ್ಧಾರೆ. ಕೊಳಗೇರಿ, ನಿರಾಶ್ರಿತರ ಶಿಬಿರ ಮುಂತಾದೆಡೆ ಉಚಿತ ಹಾಲು ನೀಡುವಿಕೆ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲಾಗುವುದು ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಬಡವರಿಗೆ ಪೌಷ್ಟಿಕಾಂಶ ಆಹಾರದ ಅವಶ್ಯಕತೆ ಇದೆ. ಅಲ್ಲದೇ ವಿವಿಧ ಹಾಲು ಒಕ್ಕೂಟಗಳಿಂದ ಪ್ರತಿದಿನ 7.75 ಲಕ್ಷ ಲೀಟರ್ ಹಾಲು ದಂಡವಾಗುತ್ತಿದೆ. ಹಾಗಾಗಿ ಇದನ್ನೇ ಸದುಪಯೋಗ ಮಾಡಿಕೊಳ್ಳಲು ಈ ಆದೇಶ ಹೊರಡಿಸಲಾಗಿದೆ. ಹಾಗಾಗಿಯೇ ಉಚಿತ ಹಾಲು ಯೋಜನೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶದ ಸುತ್ತೋಲೆ ಹೊರಡಿಸಿದೆ.
ಕೆಎಂಎಫ್ನ ಹೆಚ್ಚುವರಿ ಹಾಲನ್ನು ಖರೀದಿಸಿ ಬಡವರಿಗೆ ವಿಸ್ತರಿಸುವ ಯೋಜನೆ ಇದಾಗಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಸಚಿವರ ತಂಡ ರಾಜ್ಯದ ಹಲವೆಡೆ ಮನೆ ಮನೆಗೂ ತೆರಳಿ ಹಾಲು ವಿತರಿಸುವ ಮೂಲಕ ಈ ಯೋಜನೆ ಮುಂದುವರಿಸಲಾಗುತ್ತಿದೆ.
ಕೊರೋನಾ ಸೋಂಕು ನಿರ್ಮೂಲನೆಗಾಗಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ರೈತರಿಂದ ಅಬಾಧಿತವಾಗಿ ಹಾಲು ಖರೀದಿಸಲು ಕೆಎಂಎಫ್ ಗೆ ಸೂಚಿಸಲಾಗಿತ್ತು. ಹಾಗೆ ರೈತರಿಂದ ಖರೀದಿಸಲಾಗುತ್ತಿರುವ ಹಾಲಿನ ಪೈಕಿ ಸುಮಾರು 7.5 ಲಕ್ಷ ಲೀಟರ್ ಹಾಲನ್ನು ಬಡವರಿಗೆ ಉಚಿತವಾಗಿ ಹಂಚಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು. ಅದರಂತೆ ಬಡವರಿಗೆ ಉಚಿತವಾಗಿ ಹಾಲು ವಿತರಿಸುತ್ತಿದ್ದೇವೆ ಎಂದು ಈ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.