EBM News Kannada
Leading News Portal in Kannada

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಾಳೆ ಕರಾಳ ದಿನಾಚರಣೆ – ಭಾರತೀಯ ವೈದ್ಯಕೀಯ ಸಂಘ ಕರೆ

ನವದೆಹಲಿ(ಏ.20): ದೇಶಾದ್ಯಂತ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಕರಾಳ ದಿನಾಚರಣೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ. ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ವೈದ್ಯರು ನಾಳೆ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಕೆಲಸ ಮಾಡಲಿದ್ದಾರೆ. ಜತೆಗೆ ರಾತ್ರಿ 9 ಗಂಟೆಗೆ ದೇಶಾದ್ಯಂತ ಮೇಣದ ಬತ್ತಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಪ್ರತಿಭಟಿಸಲಿದ್ದಾರೆ.

ಇತ್ತೀಚೆಗೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಕೊರೋನಾ ಸೋಂಕು ಪೀಡಿತನ್ನು ಪರೀಕ್ಷೆಗೊಳಪಡಿಸಲು ಮುಂದಾದಾಗ ವೈದ್ಯರ ಮೇಲೆ ಸ್ಥಳೀಯರು, ಸಾರ್ವಜನಿಕರು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದನ್ನು ಖಂಡಿಸುವ ಹಿನ್ನೆಲೆಯಲ್ಲಿ ಈ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘವೂ ಸ್ಪಷ್ಟನೆ ನೀಡಿದೆ.

ಮಧ್ಯಪ್ರದೇಶ, ಹೈದರಾಬಾದ್​, ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ವೈದ್ಯರ ಮೇಲೆ ಕಲ್ಲು ತೂರಾಟ, ಎಂಜಲು ಉಗುಳುವುದು, ಬಾಯಿಗೆ ಬಂದತೆ ಬೈಯ್ಯುವ ಪ್ರಕರಣಗಳು ಕಂಡು ಬಂದಿದ್ದವು. ನಮ್ಮನ್ನು ಉಳಿಸಲು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.