EBM News Kannada
Leading News Portal in Kannada

‘ಎಣ್ಣೆ ಕುಡಿದು ಜನ ಸತ್ತರೆ ನಾವು ಜವಾಬ್ದಾರಿಯಲ್ಲ, ಹಾಸನದ ಜಿಲ್ಲಾಧಿಕಾರಿಯೇ ಹೊಣೆ’ – ಎಚ್​​.ಡಿ ರೇವಣ್ಣ ಆಕ್ರೋಶ

ಹಾಸನ(ಏ.18): ಕೊರೋನಾ ಲಾಕ್​​ಡೌನ್​​ ಸಂದರ್ಭದಲ್ಲಿ ಕೆಲವು ಬಾರ್​​ಗಳಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದರೂ ಮಾಲೀಕರ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಾಜಿ ಸಚಿವ ಎಚ್​.ಡಿ ರೇವಣ್ಣ ಆರೋಪಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಎಣ್ಣೆ ಕುಡಿದು ಯಾರಾದರೂ ಸತ್ತರೇ ನಾವು ಜವಾಬ್ದಾರಿಯಲ್ಲ. ಬಾರ್​​ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಹಾಸನದ ಜಿಲ್ಲಾಧಿಕಾರಿಯೇ ಹೊಣೆ ಎಂದು ಕಿಡಿಕಾರಿದ್ಧಾರೆ.

ಹಾಸನದ ಜಿಲ್ಲಾಧಿಕಾರಿ ಬಿಜೆಪಿ ಪರ ಕೆಸಲ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಕೇವಲ 24 ಬಾರ್​​ಗಳ ಮೇಲೆ ಮಾತ್ರ ದಾಳಿ ಮಾಡಲಾಗಿದೆ. ಬೇರೆಯವರ ಬಾರ್​​ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸುತ್ತಿಲ್ಲ. ಹಳೆಯ ದ್ರಾಕ್ಷಿ ಮತ್ತು ಸಕ್ಕರೆಯಿಂದ ಕಳ್ಳ ಭಟ್ಟಿ ಸಾರಾಯಿ ತಯಾರಿಸಲಾಗುತ್ತಿದೆ. ಆದ್ದರಿಂದ ಹಾಸನದಲ್ಲಿ ಯಾರಾದರೂ ಸತ್ತರೆ ನಾವು ಹೊಣೆಯಲ್ಲ ಎಂದು ಎಚ್​.ಡಿ ರೇವಣ್ಣ ಆರೋಪಿಸಿದ್ದಾರೆ.

ಜನರಿಗೇನಾದರೂ ಹೆಚ್ಚು ಕಡಿಮೆಯಾದೇ ಜಿಲ್ಲಾಧಿಕಾರಿಯೇ ಹೊಣೆ. ಕೆಲವರು ಕಳ್ಳ ಭಟ್ಟಿ ಎಣ್ಣೆ ಮಾರಲು ಕೈಜೋಡಿಸಿದ್ದಾರೆ. ಡಿಸಿ ಯಾರ ಹಂಗಿನಲ್ಲೂ ಕೆಸಲ ಮಾಡಬಾರದು. ಬದಲಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಒಬ್ಬ ಸರ್ಕಲ್​​ ಇನ್ಸ್​ಪೆಕ್ಟರ್​​​​ ಸೈಟ್​​ ಮಾಡಿ ದಂಧೆ ಮಾಡುತ್ತಿದ್ದಾನೆ. ಇದರಲ್ಲಿ ನೇರ ಜಿಲ್ಲಾಡಳಿತವೇ ಭಾಗಿಯಾಗಿದೆ ಎಂದು ಕುಟುಕಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕೋಟ್ಯಾಂತರ ಮೌಲ್ಯದ ಹೂವು ಮತ್ತು ತೋಟಗಾರಿಕಾ ಬೆಳೆ ಹಾಳಾಗುತ್ತಿದೆ. ಸರ್ಕಾರ ರೈತರ ಬೆಳೆ ಖರೀದಿಸದಿದ್ದರೆ, ಜಿಲ್ಲೆಯ ಆರು ಮಂದಿ ಶಾಸಕರು ಡಿಸಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ. ಜಿಲ್ಲಾಧಿಕಾರಿಗಳು ಹಾಸನ ಜಿಲ್ಲೆಯ ತೋಟಗಾರಿಕಾ ಬೆಳೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಜಿಲ್ಲೆಯ ಜೆಡಿಎಸ್​ನ ಆರು ಮಂದಿ ಶಾಸಕರು ಡಿಸಿಗೆ ಪತ್ರ ಬರೆದಿದ್ದೇವೆ ಎಂದರು.

ಹೊಗೆ ಸೊಪ್ಪು, ರೇಷ್ಮೆ ಬೆಳೆ, ಮಾವು ಸೇರಿ ರೈತರ ಎಲ್ಲಾ ಬೆಳೆಗಳಿಗೆ ಡಿಸಿ ಸರ್ಕಾರಕ್ಕೆ ಸವಿಸ್ತಾರವಾದ ವರದಿ ಕಳಿಸಬೇಕು. ಸೋಮವಾರ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆಯುವಂತೆ ಡಿಸಿಗೆ ಒತ್ತಾಯ ಮಾಡಿದ್ದೇನೆ. ಡಿಸಿ ಹಾಸನ ಬಿಟ್ಟು ತಾಲೂಕುಗಳಿಗೆ ಹೋಗಬೇಕು. ಬರೀ ಡಿಸಿ ಆಫೀಸ್​​ನಲ್ಲೇ ಕುಳಿತುಕೊಳ್ಳೋದಲ್ಲಾ ಎಂದು ಎಚ್​.ಡಿ ರೇವಣ್ಣ ತಪರಾಕಿ ಬಾರಿಸಿದ್ದಾರೆ.