EBM News Kannada
Leading News Portal in Kannada

ಪರಿಸ್ಥಿತಿ ಕೈ ಮೀರುತ್ತಿದೆ, ಜನ ಮಾತು ಕೇಳದಿದ್ದರೆ ಲಾಠಿ ಪ್ರಹಾರ ಅನಿವಾರ್ಯ; ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್

ಬೆಂಗಳೂರು: ಸೀಲ್ ಡೌನ್, ಲಾಕ್ ಡೌನ್ ನಿಯಮ ಉಲ್ಲಂಘನೆ ಬಗ್ಗೆ ವ್ಯಾಪಕವಾಗಿ ದೂರುಗಳು ಬರುತ್ತಿವೆ. ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ. ಜನ ಮಾತು ಕೇಳದಿದ್ದರೆ ಲಾಠಿ ಪ್ರಹಾರ ಅನಿವಾರ್ಯ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಕುಮಾರ್, ಹಾಲು ವಿತರಣೆ ಸಾಕಷ್ಟು ಗೊಂದಲಕ್ಕೆ ಕಾರಣ ಆಗುತ್ತಿರುವುದರಿಂದ ಹಾಲು ಪೂರೈಕೆಯನ್ನೇ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಹಾಗೂ ಆಹಾರ ವಿತರಣೆ ಗೊಂದಲ ಮುಂದುವರೆದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಅವರ ವಿರುದ್ಧ ಕ್ರಮಕ್ಕೂ ಆಲೋಚನೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಗೆ ಕೊರೋನಾ ಪಾಸಿಟಿವ್ ಶಂಕೆ ಮೇಲೆ ಅವರನ್ನುಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅವರ ರಕ್ತ ಮಾದರಿಯನ್ನು ಬಿಬಿಎಂಪಿ ಆಸ್ಪತ್ರೆಗೆ ರವಾನಿಸಿದೆ. ಕೊರೋನಾ ವೈರಸ್ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.