ತಿಮ್ಮಪ್ಪನಿಗೆ ಮತ್ತೆ ತಟ್ಟಿದ ಕೊರೋನಾ ಲಾಕ್ಡೌನ್ ಬಿಸಿ: ಮೇ 3ರವರೆಗೂ ತಿರುಪತಿ ಸಂಪೂರ್ಣ ಬಂದ್
ಅಮರಾವತಿ(ಏ.14): ಚೀನಾದಲ್ಲಿ ಕಾಣಸಿಕೊಂಡ ಕೊರೋನಾ ವೈರಸ್ ಸೋಂಕು ಭಾರತದಲ್ಲೂ ತೀವ್ರವಾಗಿ ಹರಡುತ್ತಿದೆ. ದೆಹಲಿ, ಮುಂಬೈ, ಹೈದರಾಬ್, ಬೆಂಗಳೂರು ಸೇರಿದಂತೆ ಇಡೀ ದೇಶವನ್ನೇ ಸಂಪೂರ್ಣ ಲಾಕ್ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಈಗಾಗಲೇ ಜಾರಿಯಲ್ಲಿದ್ದ 21 ದಿನಗಳ ಕಾಲ ಲಾಕ್ಡೌನ್ ಅವಧಿಯನ್ನು ಮೇ 3ನೇ ತಾರೀಕುವರೆಗೂ ವಿಸ್ತರಿಸಲಾಗಿದೆ. ಅದರಂತೆಯೇ ವಿಶ್ವ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನವೂ ಬಂದ್ ಮಾಡಲಾಗಿದೆ. ತಿಮ್ಮಪನ ದರ್ಶನದ ಬಂದ್ ಅವಧಿಯನ್ನು ಮೇ 3ರವರೆಗೂ ವಿಸ್ತರಿಸಿ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದೆ.
ಈ ಹಿಂದೆಯೇ ತಿರುಪತಿ ತಿರುಮಲ ದೇವಸ್ಥಾನಕ್ಕೂ ಕೊರೋನಾ ಬಿಸಿ ತಟ್ಟಿತ್ತು. ಮಾರ್ಚ್ 19ನೇ ತಾರೀಕು ಕೊರೋನಾ ಶಂಕಿತ ವ್ಯಕ್ತಿಯೋರ್ವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪರಿಣಾಮ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಯ್ತು. ಇದಾದ ನಂತರ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ತಿಮ್ಮಪ್ಪನ ದರ್ಶನ ಬಂದ್ ಮಾಡಿತ್ತು.
ಇಂದು ಕೊರೋನಾ ಶಂಕಿತ ವ್ಯಕ್ತಿಯೋರ್ವ ದೇವಸ್ಥಾನದ ಬಳಿ ಕುಸಿದು ಬಿದ್ದಿದ್ದರು. ಕೂಡಲೇ ಆತನನ್ನು ತಿರುಪತಿಯ ಎಸ್ವಿಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೆಯೇ ಶಂಕಿತ ವ್ಯಕ್ತಿಯೊಂದಿಗಿದ್ದ ಸಂಬಂಧಿಕರಿಗೂ ಪ್ರತ್ಯೇಕವಾಗಿ ಇರಿಸಿ ನಿಗಾವಹಿಸಲಾಗಿದೆ.