EBM News Kannada
Leading News Portal in Kannada

ಗಿಟಾರ್‌ ನುಡಿಸುತ್ತಲೇ ಮೆದುಳು ಶಸ್ತ್ರಚಿಕಿತ್ಸೆ

ಬೆಂಗಳೂರು: ಕಳೆದ ಎಂಟು ತಿಂಗಳಿನಿಂದ ಅಪರೂಪದ ಗಿಟಾರಿಸ್‌ ಡಿಸ್ಟೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಬಾಂಗ್ಲಾದೇಶದ ಢಾಕಾ ಮೂಲದ ಕಲಾವಿದ ಟಸ್ಕಿನ್‌ ಅಲಿಗೆ ವಸಂತನಗರದ ಭಗವಾನ್‌ ಮಹಾವೀರ ಜೈನ್‌ ಆಸ್ಪತ್ರೆ ವೈದ್ಯರು ಲೈವ್‌ ಮೆದುಳು ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಟಸ್ಕಿನ್‌ ಗಿಟಾರ್‌ ನುಡಿಸುತ್ತಿದ್ದರು ಎಂದು ಆಸ್ಪತ್ರೆಯ ನರರೋಗ ತಜ್ಞ ಡಾ. ಸಂಜೀವ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದಾರೆ.

ಕಂಪ್ಯೂಟರ್‌ ಇಂಜಿನಿಯರಿಂಗ್‌ ಪದವೀಧರ ಟಸ್ಕಿನ್‌ (31) ಗಿಟಾರ್‌ ನುಡಿಸುವುದರಲ್ಲಿ ಪರಿಣತನಾಗಿದ್ದು, ಬಾಂಗ್ಲಾದೇಶದ ಹಲವೆಡೆ ಕಾರ್ಯಕ್ರಮ ನೀಡಿದ್ದರು. ಆದರೆ, ಕಳೆದ ಎಂಟು ತಿಂಗಳಿನಿಂದ ಗಿಟಾರ್‌ ನುಡಿಸಲು ಸಾಧ್ಯವಾಗುತ್ತಿರಲಿಲ್ಲ. ಮೊಬೈಲ್‌ ಬಳಸುವುದು ಕೂಡ ಅವರಿಗೆ ಕಷ್ಟವಾಗಿತ್ತು. ಢಾಕಾದ ನರವಿಜ್ಞಾನಿಗಳನ್ನು ವಿಚಾರಿಸಿದಾಗ ಈ ಕಾಯಿಲೆಗೆ ಮದ್ದಿಲ್ಲ ಎಂದು ಸೂಚಿಸಿದ್ದರು. 2017ರಲ್ಲಿ ಇದೇ ಕಾಯಿಲೆ ಇದ್ದ ಅಭಿಷೇಕ್‌ ಪ್ರಸಾದ್‌ಗೆ ಶಸ್ತ್ರಚಿಕಿತ್ಸೆ ನಡೆಸಿರುವುದರ ಮಾಹಿತಿ ಪಡೆದ ಟಸ್ಕಿನ್‌, ಭಗವಾನ್‌ ಮಹಾವೀರ ಜೈನ್‌ ಆಸ್ಪತ್ರೆಯನ್ನು ಸಂಪರ್ಕಿಸಿದರು. ಅಭಿಷೇಕ್‌ ಕೂಡ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್‌ ನುಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಗೋಷ್ಠಿಯಲ್ಲಿ ನರರೋಗ ತಜ್ಞ ಡಾ. ಶರಣ್‌ ಶ್ರೀನಿವಾಸನ್‌ ಮತ್ತಿತರರು ಉಪಸ್ಥಿತರಿದ್ದರು.