ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಕರಗಿದ ಸಿಎಂ; ಸ್ವತಃ ಕರೆ ಮಾಡಿ ಮೆಚ್ಚುಗೆ ಸೂಚಿಸಿದ ಬಿಎಸ್ವೈ
ಬೆಳಗಾವಿ (ಏಪ್ರಿಲ್ 08); ಮಾರಣಾಂತಿಕ ಕೊರೋನಾ ವೈರಸ್ ಭಾರತಕ್ಕೆ ದಾಳಿ ಮಾಡಿದ ನಂತರ ಹಲವಾರು ವೈದ್ಯರು ಮತ್ತು ನರ್ಸ್ಗಳು ಮನೆಗೆ ತೆರಳದೆ, ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಬೆಳಗಾವಿಯಲ್ಲೂ ಬೆಳಕಿಗೆ ಬಂದಿದೆ.
ಆಕೆಯ ಹೆಸರು ಸುನಂದಾ ಕೋರೆಪುರ್. ಬೆಳಗಾವಿಯ ಹಲಗಾ ಗ್ರಾಮದ ನಿವಾಸಿ. ಈಕೆಗೆ 3 ವರ್ಷದ ಐಶ್ವರ್ಯ ಎಂಬ ಮಗಳಿದ್ದಾಳೆ. ಆದರೆ, ಕಳೆದ 15 ದಿನದಿಂದ ಇವರು ಮನೆಗೆ ಹೋಗದೆ ಆಸ್ಪತ್ರೆಯಲ್ಲೇ ಕೊರೋನಾ ಪೀಡಿತರಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಎರಡು ವಾರದಿಂದ ತಾಯಿಯನ್ನು ನೋಡದೆ ಮಗು ಅಳಲು ಆರಂಭಿಸಿದೆ. ಹೀಗಾಗಿ ಮಗುವಿನ ತಂದೆ ನಿನ್ನೆ ಮಗುವನ್ನು ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದ್ದ ಖಾಸಗಿ ಹೋಟೆಲ್ಗೆ ಕರೆದುಕೊಂಡು ಬಂದಿದ್ದರು. ದೂರದಲ್ಲಿ ನಿಲ್ಲಿಸಿಯೇ ತಾಯಿಯನ್ನು ತೋರಿಸಿದ್ದರು. ಈ ವೇಳೆ ಅಮ್ಮ ಬೇಕು ಅಮ್ಮ ಎಂದು ಅಳುವ ಮಗುವಿನ ದೃಶ್ಯ ಎಲ್ಲರ ಮನ ಕಲುಕಿತ್ತು.
ಬೆಳಗಾವಿ ಜಿಲ್ಲೆಯ 7 ಜನರಿಗೆ ಈಗಾಗಲೇ ಕೊರೊನಾ ಸೋಂಕು ದೃಢವಾಗಿದೆ. ಜತೆಗೆ 1044 ಜನರ ಮೇಲೆ ನಿಗಾ ವಹಿಸಲಾಗಿದೆ. ಇನ್ನೂ ಕೊರೊನಾ ಶಂಕಿತರ 33 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ 40 ಕ್ಕೂ ಹೆಚ್ಚು ವೈದ್ಯರು, 50 ಕ್ಕೂ ಹೆಚ್ಚು ಜನ ನರ್ಸ್ ಹಾಗೂ ಅನೇಕ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ನರ್ಸ್ ಸುನಂದಾ ಕೋರೆಪುರ ಎಂಬವರು ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಕರ್ತವ್ಯಕ್ಕೆ ಹಾಜರ್ ಆಗಿದ್ದಾರೆ.
ಬಿಮ್ಸ್ ನಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಮುನ್ನೆಚರಿಕೆ ಕ್ರಮವಾಗಿ ಖಾಸಗಿ ಹೋಟೆಲ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. 8 ವಾರಗಳ ಕಾಲ ಕೆಲಸ ಮಾಡಬೇಕು ನಂತರ 14 ದಿನ ಹೋಟೆಲ್ ನಲ್ಲಿಯೇ ಕ್ವಾರಂಟೈನ್ ಮಾಡಬೇಕು. ಸುನಂದಾಗೆ 3 ವರ್ಷ ಐಶ್ವರ್ಯಾ ಎಂಬ ಮಗಳಿದ್ದಾಳೆ. ಅಮ್ಮನ್ನು ಬಿಟ್ಟು ಇರಲು ಐಶ್ವರ್ಯ ಹಠ ಮಾಡುತ್ತಿದ್ದಾಳೆ.
ಖಾಸಗಿ ಹೋಟೆಲ್ ನಲ್ಲಿ ಇರೋ ಅಮ್ಮನನ್ನು ನೋಡಲು ತಂದೆಯೊಂದಿಗೆ ಮಗು ಖಾಸಗಿ ಹೋಟೆಲ್ ಬಳಿ ಕರೆ ತರಲಾಗಿತ್ತು. ಅಮ್ಮನನ್ನು ನೋಡಿದ ಮಗು ಕಣ್ಣಿರು ಹಾಕಿತು. ಅಮ್ಮನ ಬಳಿ ಹೋಗಲು ಇನ್ನಿಲ್ಲದ ಯತ್ನ ಮಾಡಿತ್ತು. ಆದರೇ ಕೊರೊನಾ ಎಂಬ ಮಹಾಮಾರಿಯ ಭೀತಿ ಹಿನ್ನೆಲೆಯಲ್ಲಿ ಅಮ್ಮನ ಬಳಿ ಮಗುವನ್ನು ಬಿಡಲಿಲ್ಲ.ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈರಲ್ ಆಗಿತ್ತು. ಇದರ ಬೆನ್ನಿಗೆ ಇಂದು ಸ್ವತಃ ತಾಯಿ ಸುನಂದ ಅವರಿಗೆ ಕರೆ ಮಾಡಿರುವ ಸಿಎಂ ಬಿಎಸ್ವೈ, “ನಿಮ್ಮ ಜೊತೆಗೆ ನಾವಿದ್ದೇವೆ, ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಗೌರವಕೊಡುತ್ತದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ” ಎಂದು ಧೈರ್ಯ ತುಂಬಿದ್ದಾರೆ ಎಂದು ತಿಳಿದುಬಂದಿದೆ.